ಜಮ್ಮು: ಜಮ್ಮು-ಕಾಶ್ಮೀರ ಸರ್ಕಾರದ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತವಾಗಿದ್ದು ಓರ್ವ ಶಾಸಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗೀರುವ ಸಜ್ಜದ್ ಲೋನ್ ತಮಗೆ ನೀಡಲಾಗಿರುವ ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಖಚಿತಪಡಿಸಿರುವ ಬಿಜೆಪಿ ಹೈಕಮಾಂಡ್, ರಾಜೀನಾಮೆ ಪತ್ರವನ್ನು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಗೆ ರವಾನಿಸಿದೆ.
ಪೀಪಲ್ಸ್ ಕಾನ್ಫರೆನ್ಸ್ ನ ಅಧ್ಯಕ್ಷರಾಗಿರುವ ಮಾಜಿ ಪ್ರತ್ಯೇಕತಾವಾದಿ ಸಜ್ಜದ್ ಲೋನ್ 2014 ರ ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಕುಪ್ವಾರ ಜಿಲ್ಲೆಯ ಹಂದ್ವಾರ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.
ತಮಗೆ ನೀಡಲಾಗಿದ್ದ ಸಮಾಜ ಕಲ್ಯಾಣ ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಜ್ಜದ್ ಲೋನ್ ಅವರ ನಿಕಟವರ್ತಿಗಳು, "ವಿಶ್ವಾಸವಿಟ್ಟಿರುವ ಜನರಿಗೆ ಸಜ್ಜದ್ ಲೋನ್ ಉತ್ತರದಾಯಿಯಾಗಿದ್ದಾರೆ ಎಂದು ಹೇಳಿದ್ದಾರೆ. ಆದರೆ ದೂರವಾಣಿ ಸಂಪರ್ಕಕ್ಕೂ ಸಿಗದೇ ಸಜ್ಜದ್ ಲೋನ್ ಮಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ನಿರ್ಧಾರವನ್ನು ಬದಲಾಯಿಸಿಕೊಳ್ಳುವಂತೆ ಸಜ್ಜದ್ ಲೋನ್ ಅವರನ್ನು ಬಿಜೆಪಿ-ಪಿಡಿಪಿ ನಾಯಕರು ಒತ್ತಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಸಜ್ಜದ್ ಲೋನ್, ಆರೋಗ್ಯ- ವೈದ್ಯಕೀಯ ಶಿಕ್ಷಣ ಖಾತೆಯ ಆಕಾಂಕ್ಷಿಯಾಗಿದ್ದರು ಎಂದು ಹೇಳಲಾಗಿದೆ.
Advertisement