ನವದೆಹಲಿ: ದೇಶದ್ರೋಹ ಆರೋಪ ಎದುರಿಸಿ ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದ ಜೆಎನ್ ಯು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಭಾನುವಾರ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾರತ್ ಮಾತಾ ಕಿ ಜೈ ವಿವಾದ ಕುರಿತಂತೆ ಮಾತನಾಡಿದ ಕನ್ಹಯ್ಯಾ ಕುಮಾರ್, "ಕೆಲವರು ಹೇಳುತ್ತಾರೆ ರಾಷ್ಟ್ರ ಎಲ್ಲವೂ ಆಗಿದ್ದು, ಭಾರತ್ ಮಾತಾ ಕಿ ಜೈ ಎಂದು ಕೂಗಲೇಬೇಕು ಎಂದು ಹೇಳುತ್ತಾರೆ. ಹೀಗಾಗಿ, ಮುಂದೆ ನಾನು ವಿವಾಹವಾದಾಗ ನನ್ನ ಪತ್ನಿಗೆ ಭಾರತ್ ಮಾತಾ ಕಿ ಜೈ ಎಂದು ಹೆಸರಿಡುತ್ತೇನೆ. ಜೊತೆಗೆ ನಾನು ಸಹ ನನ್ನ ಹೆಸರನ್ನು ಭಾರತ್ ಮಾತಾ ಕೀ ಜೈ ಎಂದು ಬದಲಾಯಿಸಿಕೊಳ್ಳಿತ್ತೇನೆ. ಇಷ್ಟೇ ಅಲ್ಲ ಮುಂದೆ ಹುಟ್ಟುವ ನನ್ನ ಮಗುವಿಗೂ ಭಾರತ್ ಮಾತಾ ಕೀ ಜೈ ಎಂದು ಹೆಸರಿಡುತ್ತೇನೆ" ಎಂದು ಹೇಳಿದ್ದಾರೆ.
"ನಮ್ಮ ಮಕ್ಕಳು ಶಾಲೆಗೆ ಹೋದಾಗ ಶಿಕ್ಷಕರು ಅವರನ್ನು ನಿಮ್ಮ ತಂದೆ, ತಾಯಿ ಹೆಸರೇನು ಎಂದು ಕೇಳಿದಾಗ ಅವರು ಭಾರತ್ ಮಾತಾ ಕೀ ಜೈ ಎಂದು ಹೇಳುತ್ತಾರೆ. ಇದರಿಂದ ಅವರಿಗೆ ಉಚಿತವಾಗಿ ಶಿಕ್ಷಣ ದೊರೆಯುವುದರ ಜೊತೆಗೆ ಶಾಲೆಗೆ ಶುಲ್ಕ ಕಟ್ಟುವ ಅಗತ್ಯವಿರುವುದಿಲ್ಲ ಎಂದು ಕನ್ಹಯ್ಯಾ ಕುಮಾರ್ ವ್ಯಂಗ್ಯ ಮಾಡಿದ್ದಾರೆ.
ಕನ್ಹಯ್ಯಾ ಕುಮಾರ್ ಅವರ ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಭಾರತ ಮಾತಾ ಕೀ ಜೈ ಘೋಷಣೆಯನ್ನು ವ್ಯಂಗ್ಯ ಮಾಡಿರುವ ಕನ್ಹಯ್ಯಾ ಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ಮತ್ತು ಟೀಕೆಗಳು ವ್ಯಕ್ತವಾಗುತ್ತಿವೆ.
Advertisement