ಹಿರಿಯ ನಟಿ ರಾಜಶ್ರೀ ಬಳಿ ಚಿನ್ನಾಭರಣ ದೋಚಿದ್ದ ಆರೋಪಿ ಬಂಧನ
ಚೆನ್ನೈ: ದಕ್ಷಿಣ ಭಾರತ ಹಿರಿಯ ನಟಿ 72 ವರ್ಷದ ರಾಜಶ್ರೀ ಅವರಿಂದ 30 ಲಕ್ಷದ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಚೆನ್ನೈನ ಟಿ.ನಗರದ ಪನಗಲ್ ಪಾರ್ಕ್ ಬಳಿ ಕಳೆದ ಎರಡು ದಿನಗಳ ಹಿಂದೆ ರಾಜಶ್ರೀ ಅವರಿಂದ ಅನಾಮಿಕನೊಬ್ಬ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪನಗಲ್ ಪಾರ್ಕ್ ಬಳಿಯ ಶೋರೂಮಿನಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
ಬಂಧಿತ ಆರೋಪಿ ತಿರುಚಿ ಮೂಲದ 30 ವರ್ಷದ ಸರ್ಪುದ್ದೀನ್ ಎಂದು ತಿಳಿದುಬಂದಿದ್ದು, ಇತನಿಂದ ರೋಲೆಕ್ಸ್ ಗಡಿಯಾರ ಮತ್ತು ವಜ್ರಗಳು, 10 ಸವರನ್ ಚಿನ್ನದ ಒಡವೆಗಳು ಹಾಗೂ ಬ್ರಾಸ್ ಲೈಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಂಬಂಧಿಕರೊಬ್ಬರ ಮದುವೆಗಾಗಿ ಏಪ್ರಿಲ್ 12 ರಂದು ರಾಜಶ್ರೀ ಅವರು ಮಗನೊಂದಿಗೆ ಪನಗಲ್ ಪಾರ್ಕ್ ನ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಇಟ್ಟಿದ್ದ ಚಿನ್ನಾಭರಣವನ್ನು ಪಡೆದು ಕಾರಿನಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಆರೋಪಿ ತಮ್ಮ ಹಣ ಬಿದ್ದಿರುವುದಾಗಿ ನಟಿಗೆ ಹೇಳಿದ್ದಾನೆ. ಈ ವೇಳೆ ರಾಜಶ್ರೀ ಅವರು ಕಾರಿನಿಂದ ಇಳಿದು ಹಣ ತೆಗೆದುಕೊಳ್ಳುವಾಗ ಆರೋಪಿ ಕಾರಿನಲ್ಲಿದ್ದ ಚಿನ್ನಾಭರಣ ಬ್ಯಾಗಿನೊಂದಿಗೆ ಪರಾರಿಯಾಗಿದ್ದ. ಈ ಸಂಬಂಧ ಪೊಂಡಿ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ