ನವದೆಹಲಿ: ಅರುಣಾಚಲಪ್ರದೇಶ ಹಾಗೂ ಉತ್ತರಾಖಂಡ್ ನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರಪತಿ ಆಡಳಿತ ಜಾರಿಗೆ ತಂದಿರುವುದನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ವಿರುದ್ಧ ಕಾಂಗ್ರೆಸ್ ನಾಯಕ ಹಂಸರಾಜ್ ಭಾರದ್ವಾಜ್ ಆರೋಪ ಮಾಡಿದ್ದಾರೆ.
ರಾಷ್ಟ್ರಪತಿ ಆಡಳಿತಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಪಕ್ಷ, ಯುಪಿಎ-1 ಸರ್ಕಾರ ಅಧಿಕಾರದಲ್ಲಿದ್ದಾಗ 2007 ರಲ್ಲಿ ಮುಲಾಯಂ ಸಿಂಗ್ ಯಾದವ್ ಸರ್ಕಾರವನ್ನು ವಜಾಗೊಳಿಸಲು ಯತ್ನಿಸಿತ್ತು ಎಂದು ಹಂಸರಾಜ್ ಭಾರದ್ವಾಜ್ ಆರೋಪ ಮಾಡಿದ್ದಾರೆ.
ಯುಪಿಎ-1 ರಲ್ಲಿ ಕಾನೂನು ಸಚಿವರಾಗಿದ್ದ ಹಂಸರಾಜ ಭಾರದ್ವಾಜ್, ಭ್ರಷ್ಟಾಚಾರದ ಆರೋಪದಡಿ ಉತ್ತರ ಪ್ರದೇಶದಲ್ಲಿದ್ದ ಮುಲಾಯಂ ಸಿಂಗ್ ಯಾದವ್ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಲು ಕಾಂಗ್ರೆಸ್ ನ ಒಂದು ಗುಂಪು ಉತ್ಸುಕವಾಗಿತ್ತು ಎಂದು ಹೇಳಿದ್ದಾರೆ. ಆದರೆ ಈ ಪ್ರಸ್ತಾವನೆ ಸಂವಿಧಾನ ಬಾಹಿರವಾದ್ದರಿಂದ ವಿರೋಧಿಸಿದ್ದಾಗಿ ಹಂಸರಾಜ ಭಾರದ್ವಾಜ್ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಪ್ರಧಾನಿ ಮನಮೋಹನ್ ಸಿಂಗ್ ದ್ವಂದ್ವ ಮನಸ್ಥಿತಿ ಹೊಂದಿದ್ದರು. ಆದರೆ ಪಿ.ಚಿದಂಬರಂ, ಪ್ರಣಬ್ ಮುಖರ್ಜಿ, ಸೋನಿಯಾ ಗಾಂಧಿ, ಕಪಿಲ್ ಸಿಬಲ್, ಶಿವರಾಜ್ ಪಾಟೀಲ್ ಸೇರಿದಂತೆ ಬಹುತೇಕ ಕಾಂಗ್ರೆಸ್ಸಿಗರು ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವ ಪರವಾಗಿದ್ದರು ಮಾಜಿ ರಾಜ್ಯಪಾಲ ಭಾರದ್ವಾಜ್ ಹೇಳಿದ್ದಾರೆ.
ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವ ಯೋಜನೆ ಪಿ ಚಿದಂಬರಂ ಅವರದ್ದಾಗಿತ್ತು. ಇದಕ್ಕಾಗಿ ಯೋಜನೆ ರೂಪುಗೊಳಿಸುವ ಜವಾಬ್ದಾರಿಯನ್ನು ಕಪಿಲ್ ಸಿಬಲ್ ಹೊತ್ತುಕೊಂಡಿದ್ದರು ಎಂದು ಭಾರದ್ವಾಜ್ ಆರೋಪಿಸಿದ್ದಾರೆ.
Advertisement