ಹೈದರಾಬಾದ್: ನಗರದಲ್ಲಿ ಅತಿವೇಗವಾಗಿ ಕಾರು ಚಾಲನೆ ಮಾಡಿದ್ದಕ್ಕಾಗಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ವೈ.ಎಸ್. ಚೌಧರಿ ಅವರ ಪುತ್ರ ಕಾರ್ತಿಕ್ ವಿರುದ್ಧ ಹೈದರಾಬಾದ್ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅವರ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಸಂಚಾರ ಪೊಲೀಸರು ವಿಶೇಷ ರಸ್ತೆ ಸುರಕ್ಷತಾ ಕ್ರಮ ಕೈಗೊಂಡಿದ್ದ ವೇಳೆಯಲ್ಲಿ ಇಲ್ಲಿನ ಜುಬಿಲಿ ಹಿಲ್ಸ್ ಚೆಕ್ ಪೋಸ್ಟ್ ಮತ್ತು ಕೆಬಿಆರ್ ಪಾರ್ಕ್ ಗೇಟ್ ಮಧ್ಯದ ರಸ್ತೆಯಲ್ಲಿ ಕಾರ್ತಿಕ್ ಅತಿವೇಗದ ಚಾಲನೆ ನಡೆಸಿದ್ದು ಪತ್ತೆಯಾಯಿತು ಎಂದು ಬಂಜಾರಾ ಹಿಲ್ಸ್ ಟ್ರಾಫಿಕ್ ಪೊಲೀಸ್ ಠಾಣೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷ ರಸ್ತೆ ಸುರಕ್ಷತಾ ಕ್ರಮದ ಹೊತ್ತಿನಲ್ಲಿ ವಿವಿಧ ರಸ್ತೆ ನಿಯಮ ಉಲ್ಲಂಘನೆಗಳಿಗಾಗಿ ಇತರ ಕೆಲವು ಮೋಟಾರು ವಾಹನ ಚಾಲಕರ ಜೊತೆಗೆ ನಾವು ಕಾರ್ತಿಕ ಅವರನ್ನೂ ಹಿಡಿದೆವು. ಕಾರ್ತಿಕ್ ವಿರುದ್ಧ ಮೋಟಾರು ವಾಹನ ಕಾಯ್ದೆಯ 184 (ಬಿ) ವಿಧಿ ಅಡಿಯಲ್ಲಿ ಅತಿವೇಗದ ಚಾಲನೆ ಪ್ರಕರಣ ದಾಖಲಿಸಿಕೊಂಡಿದ್ದೇವೆ.
ಕಾರ್ತಿಕ್ ಬಳಿ ಇದ್ದ ಪಾರ್ಷ್ ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಅವರನ್ನು ಬಂಧಿಸಲಾಗಿಲ್ಲ. ಆದರೆ ದಂಡ ವಿಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
Advertisement