ಅಹ್ಮದಾಬಾದ್: ನೂತನ ಗುಜರಾತ್ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ನೇಮಕಗೊಂಡ ಬೆನ್ನಲ್ಲೇ ಆಡಳಿತಾ ರೂಢ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ತಮ್ಮ ಬೆಂಬಲಿಗರಿಗೆ ಮನ್ನಣೆ ನೀಡದ ಹಿನ್ನಲೆಯಲ್ಲಿ ಮಾಜಿ ಸಿಎಂ ಆನಂದಿ ಬೆನ್ ಪಟೇಲ್ ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.
ಪ್ರಮುಖವಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ಆನಂದಿ ಬೆನ್ ಪಟೇಲ್ ಅವರು ಆಕ್ರೋಶಗೊಂಡಿದ್ದು, ನೂತನ ಸರ್ಕಾರದಲ್ಲಿ ತಮ್ಮ ಬೆಂಬಲಿಗರನ್ನು ಕಣೆಗಣಿಸಲಾಗಿದೆ ಎಂದು ಅವರು ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಸಿಎಂ ಗಾದಿಯಿಂದ ಕೆಳಗಿಳಿಯಲು ಬಯಸಿದ್ದ ಆನಂದಿಬೆನ್ ಪಟೇಲ್ ಅವರು, ತಮ್ಮ ಬದಲಿಗೆ ತಮ್ಮ ಬೆಂಬಲಿಗರಿಗೆ ಸರ್ಕಾರದಲ್ಲಿ ಪ್ರಮುಖ ಹುದ್ದೆ ನೀಡಿಬೇಕು ಎಂದು ಕೇಳಿದ್ದರು.
ಆದರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಆನಂದಿಬೆನ್ ಪಟೇಲ್ ಅವರ ಮನವಿಯನ್ನು ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಆನಂದಿಬೆನ್ ಪಟೇಲ್ ಅವರ ಪ್ರಸ್ತಾಪಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ರೀತಿಯ ಉತ್ತರ ನೀಡಿರಲಿಲ್ಲ. ಎಲ್ಲರೂ ಪ್ರಧಾನಿ ಮೋದಿ ಆನಂದಿಬೆನ್ ಪಟೇಲ್ ಅವರ ಪ್ರಸ್ತಾಪಗಳನ್ನು ಒಪ್ಪಿದ್ದಾರೆ ಎಂದು ಭಾವಿಸಿದ್ದರು. ಆದರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಆನಂದಿಬೆನ್ ಪಟೇಲ್ ಅವರ ಬೆಂಬಲಿಗ ಪಡೆಯನ್ನು ಸರ್ಕಾರದಿಂದ ದೂರವಿಟ್ಟಿದ್ದು, ತಮ್ಮ ಪರಮಾಪ್ತರನ್ನು ಸರ್ಕಾರದಲ್ಲಿ ಭಾಗಿಯಾಗುವಂತೆ ನೋಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಈ ಹಿಂದೆ ಸುದ್ದಿಗೋಷ್ಠಿಯೊಂದರಲ್ಲಿ ಪತ್ರಕರ್ತರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಅಮಿತ್ ಶಾ "ನೋ ನಾಥ್ ಇನ್ ಗುಜರಾತ್" ಎಂದು ಹೇಳುವ ಮೂಲಕ ಪರೋಕ್ಷವಾಗಿ ಆನಂದಿ ಬೆನ್ ಪಟೇಲ್ ಅವರ ಬೆಂಬಲಿಗಪಡೆಯನ್ನು ಅಧಿಕಾರದಿಂದ ದೂರವಿಡುವ ಕುರಿತು ಮುನ್ಸೂಚನೆ ನೀಡಿದ್ದರು ಎಂದು ಹೇಳಲಾಗುತ್ತಿದೆ. ಪ್ರಸ್ತುತ ತಮ್ಮ ಬೆಂಬಲಿಗರಿಗೆ ಸರ್ಕಾರದಲ್ಲಿ ಮನ್ನಣೆ ದೊರೆಯದ ಹಿನ್ನಲೆಯಲ್ಲಿ ಆನಂದಿ ಬೆನ್ ಪಟೇಲ್ ತೀವ್ರ ಅಸಮಾಧಾನಗೊಂಡಿದ್ದು, ತಮ್ಮ ಬೆಂಬಲಿಗರೊಂದಿಗೆ ಮುಂದಿನ ನಡೆ ಕುರಿತು ಚರ್ಚೆ ನಡೆಸಿದ್ದಾರೆ.
Advertisement