ಪಾಕಿಸ್ತಾನ ಸಾರ್ಕ್ ಶೃಂಗಸಭೆಗೆ ವಿತ್ತ ಸಚಿವ ಅರುಣ್ ಜೇಟ್ಲಿ ಗೈರು!

ಮುಂದಿನ ವಾರ ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ನಡೆಯಲಿರುವ ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳದಿರಲು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ (ಸಂಗ್ರಹ ಚಿತ್ರ)
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ (ಸಂಗ್ರಹ ಚಿತ್ರ)

ನವದೆಹಲಿ: ಮುಂದಿನ ವಾರ ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ನಡೆಯಲಿರುವ ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳದಿರಲು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ನಿರ್ಧರಿಸಿದ್ದಾರೆ ಎಂದು  ಹೇಳಲಾಗುತ್ತಿದೆ.

ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ಮುಂದಿನವಾರದಿಂದ ಸಾರ್ಕ್ ಶೃಂಗಸಭೆ ಆರಂಭವಾಗಲಿದ್ದು, ಈ ಬಹು ನಿರೀಕ್ಷಿತ ಶೃಂಗಸಭೆಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು  ಹಾಜರಾಗದಿರಲು ನಿರ್ಧರಿಸಿದ್ದಾರೆ ಎಂದು ವಿತ್ತ ಸಚಿವಾಲಯದ ಮೂಲಗಳು ತಿಳಿಸಿವೆ. ಅರುಣ್ ಜೇಟ್ಲಿ ಅವರ ಬದಲಿಗೆ ವಿತ್ತ ಸಚಿವಾಲಯದ ಕಾರ್ಯದರ್ಶಿ ಶಕ್ತಿದಾಸ್ ಕಾಂತ್ ಅವರು ಸಾರ್ಕ್  ಶೃಂಗಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಸೂಚನೆ ನೀಡಿದರೆ ಅರುಣ್ ಜೇಟ್ಲಿ ಅವರು ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಈ ಹಿಂದೆ ಕೇಂದ್ರ ಗೃಹ ಸಚಿವ  ರಾಜನಾಥ್ ಸಿಂಗ್ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ವೇಳೆ ವಿನಾಕಾರಣ ಕಾಶ್ಮೀರ ವಿಚಾರವನ್ನು ಪಾಕಿಸ್ತಾನ ಪ್ರಸ್ತಾಪಿಸಿ ಭಾರತವನ್ನು ಕೆಣಕಿತ್ತು. ಈ ಬೆಳವಣಿಗೆ ಬಳಿಕ ಉಭಯ ದೇಶಗಳ  ನಡುವಿನ ಸಂಬಂಧ ಹಳಸಿತ್ತು. ಅಲ್ಲದೆ ರಾಜನಾಥ್ ಸಿಂಗ್ ಅವರಿಗೆ ಪಾಕಿಸ್ತಾನ ನೀಡಿದ್ದ ಆತಿಥ್ಯ ನಿಜಕ್ಕೂ ಖಂಡನಾರ್ಹವಾಗಿತ್ತು. ಈ ಹಿನ್ನಲೆಯಲ್ಲಿ ಅರುಣ್ ಜೇಟ್ಲಿ ಅವರು ಪಾಕಿಸ್ತಾನಕ್ಕೆ  ತೆರಳದಿರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಪಾಕಿಸ್ತಾನ ರಾಜನಾಥ್ ಸಿಂಗ್ ಅವರ ಪ್ರವಾಸದ ಸಂದರ್ಭದಲ್ಲಿ ಆದ ಆಚಾತುರ್ಯ ಅರುಣ್ ಜೇಟ್ಲಿ ಅವರ ಪ್ರವಾಸದ ವೇಳೆ ಆಗುವುದಿಲ್ಲ. ಈ ಬಗ್ಗೆ ನಾವು  ಭರವಸೆ ನೀಡುತ್ತೇವೆ ಎಂದು ಪಾಕಿಸ್ತಾನ ಹೇಳಿತ್ತು. ಪಾಕಿಸ್ತಾನದ ಈ ಪ್ರಚೋದನಾತ್ಮಕ ನಡೆಗೆ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸ ದಿನಾಚರಣೆ ಭಾಷಣೆದಲ್ಲಿ ತಿರುಗೇಟು  ನೀಡಿದ್ದರು. ಬಲೂಚಿಸ್ತಾನದಲ್ಲಿನ ಹಿಂಸಾಚಾರವನ್ನು ಪ್ರಶ್ನಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಹೋರಾಟಗಾರರಿಗೆ ಬೆಂಬಲ ನೀಡಿವುದಾಗಿ ಘೋಷಣೆ ಮಾಡಿದ್ದರು.

ಕಾಶ್ಮೀರ ಹಿಂಸಾಚಾರದ ಹಿನ್ನಲೆಯಲ್ಲಿ ಮತ್ತು ಬಲೂಚಿಸ್ತಾನ ನಾಗರೀಕರ ಹೋರಾಟಕ್ಕೆ ಭಾರತದ ಬೆಂಬಲ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವಿನ ಸಂಬಂಧ  ಪ್ರಸ್ತುತ ಹಳಸಿದ್ದು, ಉಭಯ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಮತ್ತೊಂದೆಡೆ ಕಾಶ್ಮೀರ ವಿಚಾರವನ್ನು ಪಾಕಿಸ್ತಾನಿ ಮಾಧ್ಯಮಗಳು ವೈಭವೀಕರಿಸುತ್ತಿದ್ದರೆ,  ಇತ್ತ ಭಾರತೀಯ ಮಾಧ್ಯಮಗಳು ಬಲೂಚಿಸ್ತಾನದ ಸಮಸ್ಯೆಗಳನ್ನಿಟ್ಟುಕೊಂಡು ವರದಿಗಳನ್ನು ಬಿತ್ತರಿಸುತ್ತಿವೆ.

ಇನ್ನು ನಿನ್ನೆ ದೆಹಲಿಯ ಕೆಂಪುಕೋಟೆಯಲ್ಲಿ 70ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಬಲೂಚಿಸ್ತಾನದ ಜನತೆಯ  ಹೋರಾಟಕ್ಕೆ ತಾವು ಬೆಂಬಲ ನೀಡುವುದಾಗಿ ತಿಳಿಸಿದ್ದರು. ಪಾಕಿಸ್ತಾನ ಕಾಶ್ಮೀರವನ್ನು ಆಕ್ರಮಿಸಿದ ಬಳಿಕ ಭಾರತೀಯ ಪ್ರಧಾನಿಯೊಬ್ಬರು ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದ ಸಮಸ್ಯೆ ಕುರಿತು  ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಸ್ತಾಪ ಮಾಡಿರುವುದು ಇದೇ ಮೊದಲ ಬಾರಿಯಾಗಿದ್ದು, ಇದು ಪಾಕಿಸ್ತಾನಕ್ಕೆ ಇರಿಸು-ಮುರಿಸು ತಂದೊಡ್ಡಿದೆ.

ಅಲ್ಲದೆ ಬಲೂಚಿಸ್ತಾನ ಜನತೆ ಕೂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿರುವುದು ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಜುಗರಕ್ಕೀಡಾಗುವಂತೆ  ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com