ಶ್ರೀನಗರ: ಉಗ್ರ ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಭುಗಿಲೆದ್ದಿದ್ದ ಹಿಂಸಾಚಾರ ಮತ್ತು ನಿಷೇಧಾಜ್ಞೆ ಹೇರಿಕೆ ಸತತ 46ನೇ ದಿನಕ್ಕೆ ಕಾಲಿಟ್ಟಿರುವಂತೆಯೇ ರಾಜಧಾನಿ ಶ್ರೀನಗರದ ಹಲವೆಡೆ ಕರ್ಫ್ಯೂ ತೆರವುಗೊಳಿಸಲಾಗಿದೆ.
ಕಾಶ್ಮೀರದ ಬಟಮಲೂ, ಮೈಸುಮಾ ಮತ್ತು ಕ್ರಾಲ್ಕುಡ್ ಪಟ್ಟಣಗಳಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು ತೆರವುಗೊಳಿಸಲಾಗಿದೆ. ಈ ಮೂರು ಪಟ್ಟಣಗಳಲ್ಲಿ ಪರಿಸ್ಥಿತಿ ಕೊಂಚ ಶಾಂತವಾಗಿರುವ ಹಿನ್ನಲೆಯಲ್ಲಿ ಕರ್ಫ್ಯೂ ತೆರವುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಕಾಶ್ಮೀರದ ಇನ್ನುಳಿದ ಜಿಲ್ಲೆಗಳಲ್ಲಿ ಕರ್ಫ್ಯೂ ಮುಂದುವರೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದೀಗ ನಗರದಲ್ಲಿ ಖಾಸಗಿ ಬಸ್, ಆಟೋ ರಿಕ್ಷಾ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ ದಕ್ಷಿಣ ಕಾಶ್ಮೀರದ ಅನಂತಾನಾಗ್ ಜಿಲ್ಲೆ, ಪುಲ್ವಾಮಾ ಮತ್ತು ಕುಪ್ವಾರದ ಬಹುತೇಕ ಜಿಲ್ಲೆಗಳಲ್ಲಿ ಕರ್ಫ್ಯೂ ಮುಂದುವರೆದಿದೆ.
ನಿನ್ನೆ ಪರಿಸ್ಥಿತಿ ಕೊಂಚ ಶಾಂತವಾಗಿದ್ದ ಹಿನ್ನಲೆಯಲ್ಲಿ ಶ್ರೀನಗರದ ಕೆಲ ಪ್ರದೇಶಗಳಲ್ಲಿ 8 ಗಂಟೆಗಳ ಕಾಲ ಕರ್ಫ್ಯೂ ತೆರವು ಮಾಡಲಾಗಿತ್ತು. ಬಳಿಕ ಇಂದೂ ಕೂಡ ಪರಿಸ್ಥಿತಿ ಶಾಂತವಾಗಿರುವ ಹಿನ್ನಲೆಯಲ್ಲಿ ಕರ್ಫ್ಯೂ ತೆರವುಗೊಳಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
Advertisement