ಕಾಶ್ಮೀರದಲ್ಲಿ ಮತ್ತೆ ಮುಂದುವರೆದ ಹಿಂಸಾಚಾರ: ಕಲ್ಲು ತೂರಾಟದಲ್ಲಿ 17 ಮಂದಿಗೆ ಗಾಯ

ಕಣಿವೆಗಳ ರಾಜ್ಯ ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಕಲ್ಲು ತೂರಾಟದಲ್ಲಿ 17 ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರ...
ಕಲ್ಲು ತೂರಾಟ ವೇಳೆ ಮಹಿಳೆಯೊಬ್ಬರನ್ನು ರಕ್ಷಣೆ ಮಾಡುತ್ತಿರುವ ಯೋಧರು
ಕಲ್ಲು ತೂರಾಟ ವೇಳೆ ಮಹಿಳೆಯೊಬ್ಬರನ್ನು ರಕ್ಷಣೆ ಮಾಡುತ್ತಿರುವ ಯೋಧರು

ಶ್ರೀನಗರ: ಕಣಿವೆಗಳ ರಾಜ್ಯ ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಕಲ್ಲು ತೂರಾಟದಲ್ಲಿ 17 ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ.

ಉಗ್ರ ಬುರ್ಹಾನ್ ವಾನಿ ಹತ್ಯೆ ಬಳಿಕ ಭುಗಿಲೆದ್ದಿದ್ದ ಹಿಂಸಾಚಾರ ಕಾಶ್ಮೀರ ರಾಜ್ಯದಲ್ಲಿ ಸಾಕಷ್ಟು ಅಶಾಂತಿಯನ್ನು ಸೃಷ್ಟಿಸಿದೆ. ಗಲಭೆ ಹಾಗೂ ಘರ್ಷಣೆಯಿಂದಾಗಿ ಅಲ್ಲಿನ ಜನರು ತತ್ತರಿಸಿ ಹೋಗಿದ್ದಾರೆ.

ಇತ್ತೀಚೆಗಷ್ಟೇ ಪರಿಸ್ಥಿತಿ ಸುಧಾರಿಸಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೆಲ ಪ್ರದೇಶಗಳಲ್ಲಿ ಕರ್ಫ್ಯೂವನ್ನು ತೆರವುಗೊಳಿಸಿ, ಮುಂಜಾಗ್ರತಾ ಕ್ರಮವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಕರ್ಫ್ಯೂವನ್ನು ಮುಂದವರೆಸಿದ್ದರು. ಆದರೆ, ಇದೀಗ ಮತ್ತೆ ಶೋಪಿಯಾನ್ ಜಿಲ್ಲೆಯಲ್ಲಿ ಕಲ್ಲು ತೂರಾಟ ಆರಂಭವಾಗಿದ್ದು, ಕೆಲ ದುಷ್ಕರ್ಮಿಗಳು ಸೇನೆಯನ್ನು ಗುರಿಯಾಗಿರಿಸಿಕೊಂಡು ಕಲ್ಲು ತೂರಾಟ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ನೂರಕ್ಕೂ ಹೆಚ್ಚು ಜನರು ವೆಹ್ಲಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಲು ಆರಂಭಿಸಿದ್ದರು. ಇದರಂತೆ ಪ್ರತಿಭಟನಾನಿರತ ಜನರ ಮಧ್ಯೆ ಬಂದಿರುವ ದುಷ್ಕರ್ಮಿಗಳು ಏಕಾಏಕಿ ಕಲ್ಲು ತೂರಾಟ ನಡೆಸಲು ಆರಂಭಿಸಿದ್ದಾರೆ. ಪರಿಣಾಮ 17 ಮಂದಿ ಗಾಯಗೊಂಡಿದ್ದಾರೆ. ಪ್ರತಿಭಟನಾನಿರತರನ್ನು ಚದುರಿಸುವ ಸಲುವಾಗಿ ಪೊಲೀಸರು ಅಶ್ರುವಾಯು ದಾಳಿ ನಡೆಸಿದ್ದಾರೆಂದು ಹೇಳಲಾಗುತ್ತಿದೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, 17 ಮಂದಿಯ ಪೈಕಿ ಮೂವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಘಟನೆಯಲ್ಲಿ ನಾಲ್ಕು ಮಂದಿಗೆ ಗಂಭೀರವಾಗಿ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶ್ರೀನಗರದಲ್ಲಿರುವ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದಾರೆಂದು ಪೊಲೀಸರು ಹೇಳಿದ್ದಾರೆ.

ನೌಗಾಮ್ ಪ್ರದೇಶ, ಬಾರಾಮುಲ್ಲಾ ಜಿಲ್ಲೆ ಹಾಗೂ ಬಂಡಿಪೋರ ಟೌನ್ ನಲ್ಲೂ ಕಲ್ಲು ತೂರಾಟಗಳು ನಡೆಯುತ್ತಿದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿದೆ.

ಕಾಶ್ಮೀರಕ್ಕೆ ನಾಳೆ ರಾಜನಾಥ್ ಸಿಂಗ್ ಭೇಟಿ
ಕಾಶ್ಮೀರದಲ್ಲಿ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ನಾಳೆ ಗೃಹ ಸಚಿವ ರಾಜನಾಥ್ ಸಿಂಗ್ ಅವರು 2ನೇ ಬಾರಿ ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆಂದು ತಿಳಿದುಬಂದಿದೆ.

2 ದಿನಗಳ ಕಾಲ ಕಾಶ್ಮೀರಕ್ಕೆ ಭೇಟಿ ನೀಡಲಿರುವ ರಾಜನಾಥ್ ಸಿಂಗ್ ಅವರು, ಪರಿಸ್ಥಿತಿ ಅವಲೋಕಿಸಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆಂದು ಮೂಲಗಳು ತಿಳಿಸಿವೆ.

ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ಹಿಂಸಾಚಾರದಲ್ಲಿ ಇಬ್ಬರು ಪೊಲೀಸರು ಸೇರಿ 65 ಮಂದಿ ಈ ವರೆಗೂ ಸಾವನ್ನಪ್ಪಿದ್ದಾರೆ. ಅಲ್ಲದೆ, ಭದ್ರತಾ ಸಿಬ್ಬಂದಿ ಸೇರಿ ಹಲವರು ಗಾಯಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com