ಸಂಪುಟ ಒಪ್ಪಿಗೆ ಇಲ್ಲದೇ ಸುಗ್ರೀವಾಜ್ಞೆ; ಕೇಂದ್ರ ಸರ್ಕಾರಕ್ಕೆ ರಾಷ್ಟ್ರಪತಿ ಪ್ರಣಬ್ ಚಾಟಿ!

ಕೇಂದ್ರ ಸಂಪುಟ ಸಭೆಯ ಒಪ್ಪಿಗೆ ಇಲ್ಲದೇ ಸಹಿಗೆ ಕಳುಹಿಸಿದ ಸುಗ್ರೀವಾಜ್ಞೆ ಕುರಿತಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮತ್ತೆ ಹೀಗೆ ಆಗದಂತೆ ಎಚ್ಚರಿಕೆ ನೀಡಿದ್ದಾರೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ (ಸಂಗ್ರಹ ಚಿತ್ರ)
ರಾಷ್ಟ್ರಪತಿ ಪ್ರಣಬ್ ಮುಖರ್ಜಿ (ಸಂಗ್ರಹ ಚಿತ್ರ)

ನವದೆಹಲಿ: ಕೇಂದ್ರ ಸಂಪುಟ ಸಭೆಯ ಒಪ್ಪಿಗೆ ಇಲ್ಲದೇ ಸಹಿಗೆ ಕಳುಹಿಸಿದ ಸುಗ್ರೀವಾಜ್ಞೆ ಕುರಿತಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮತ್ತೆ ಹೀಗೆ ಆಗದಂತೆ  ಎಚ್ಚರಿಕೆ ನೀಡಿದ್ದಾರೆ.

ಭಾರತದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಕೇಂದ್ರ ಸಂಪುಟದ ಒಪ್ಪಿಗೆ ಇಲ್ಲದೇ ಸುಗ್ರೀವಾಜ್ಞೆಯೊಂದನ್ನು ರಾಷ್ಟ್ರಪತಿಗಳ ಸಹಿಗೆ ಕಳುಹಿಸಿದ್ದು, ಕೇಂದ್ರ ಸರ್ಕಾರದ  ಈ ನಡೆಯಿಂದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಸಮಾಧಾನಗೊಂಡಿದ್ದಾರೆ. 48 ವರ್ಷ ಹಳೆಯ ಶತ್ರು ಆಸ್ತಿ ಕಾಯ್ದೆ (ಚೀನಾ- ಪಾಕಿಸ್ತಾನ ಯುದ್ಧ ವೇಳೆ ಭಾರತ ತೊರೆದಿದ್ದ ನಾಗರಿಕರ ಆಸ್ತಿಯನ್ನು  ಇತರರು ವಶ/ವರ್ಗಾವಣೆ ಮಾಡದಂತೆ ಇರುವ ಕಾಯ್ದೆ)ಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದ್ದು, ಅದನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಆದರೆ ಕೆಲವೊಂದು ಬದಲಾವಣೆಗೆ ವಿಪಕ್ಷಗಳು  ಬಯಸಿದ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ಈ ತಿದ್ದುಪಡೆ ಕಾಯ್ದೆಗೆ ಅನುಮೋದನೆ ದೊರೆತಿರಲಿಲ್ಲ.

ಹೀಗಾಗಿ ಈ ಬಗ್ಗೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಗೆ ಉದ್ದೇಶಿಸಿತ್ತು. ಇದೇ ಸುಗ್ರೀವಾಜ್ಞೆಯನ್ನು ಹಿಂದೆ ನಾಲ್ಕು ಬಾರಿ ಹೊರಡಿಸಲಾಗಿತ್ತು. ಇದೇ ಭಾನುವಾರ ಈ ಆದೇಶದ ಅವಧಿ  ಅಂತ್ಯಗೊಳ್ಳುತ್ತಿತ್ತು. ಹೀಗಾಗಿ ಇದರ ನವೀಕರಣಕ್ಕೆ ಕೇಂದ್ರ ಸರ್ಕಾರ ರಾಷ್ಟ್ರಪತಿಗೆ ಸುಗ್ರೀವಾಜ್ಞೆಯನ್ನು ಸಹಿಗಾಗಿ ರವಾನಿಸಿತ್ತು. ಆದರೆ, ಸಂಪುಟ ಅನುಮೋದನೆ ರಹಿತವಾಗಿ ತಮ್ಮ ಬಳಿ  ಸಹಿಗೆ ಕಳಿಸಿದ್ದನ್ನು ನೋಡಿದ ಪ್ರಣಬ್‌, "ಜನಹಿತಕ್ಕಾಗಿ ಸಹಿ ಹಾಕ್ತಿದ್ದೇನೆ. "ಮುಂದೆಂದೂ ಈ ರೀತಿ ಮಾಡಬೇಡಿ' ಎಂದು ಶರಾ ಬರೆದು ಕಳಿಸಿದ್ದಾರೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಕೇಂದ್ರ ಸಂಪುಟದ ಒಪ್ಪಿಗೆ ಇಲ್ಲದೇ ಸರ್ಕಾರವೊಂದು ರಾಷ್ಟ್ರಪತಿಗಳ ಅಂಕಿತಕ್ಕೆ ಸುಗ್ರೀವಾಜ್ಞೆಯನ್ನು ಕಳುಹಿಸಿರುವುದು ಇದೇ ಮೊದಲಾಗಿದ್ದು,  ಸಂಪುಟದ ಒಪ್ಪಿಗೆ ಇಲ್ಲದೇ ರಾಷ್ಟ್ರಪತಿಗಳು ಅನುಮೋದನೆ ನೀಡಿರುವುದು ಕೂಡಿ ಇದೇ ಮೊದಲ ಬಾರಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com