ಚೆನ್ನೈ: ತಮಿಳು ನಾಡು ಮುಖ್ಯಮಂತ್ರಿಯಾಗಿ ಜಯಲಲಿತಾ ಅವರು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದರು, ಅದರಲ್ಲಿ ಬಹಳ ಪ್ರಸಿದ್ಧವಾದದ್ದು ಅಮ್ಮಾ ಕ್ಯಾಂಟೀನ್.
ಅಮ್ಮಾ ಕ್ಯಾಂಟೀನ್ ಬಡವರಿಗೆ ಕಡಿಮೆ ಬೆಲೆಗೆ ಬಿಸಿಬಿಸಿ ಆಹಾರ ನೀಡುತ್ತಿತ್ತು. ಜಯಲಲಿತಾ ನೆನಪಿಗಾಗಿ ಈ ಯೋಜನೆ ಮುಂದುವರಿಯಬೇಕಾಗಿದೆ ಎಂದು ಮರೀನಾ ಬೀಚ್ ನಲ್ಲಿರುವ ಜಯಲಲಿತಾ ಸಮಾಧಿ ನೋಡಲು ಬಂದ ಮಂಗೈ ಶಂಕರಿ ಎಂಬಾಕೆ ತಿಳಿಸಿದ್ದಾರೆ.
ಕಳೆದ ವರ್ಷದ ಬಜೆಟ್ ಮಂಡನೆಯಾದ ನಂತರ ಅಮ್ಮಾ ಕ್ಯಾಂಟೀನ್ ಗಳನ್ನು ಆಸ್ಪತ್ರೆ ಗಳ ಆವರಣದಲ್ಲಿ ತೆರೆಯಲಾಗಿತ್ತು, ಇದರಿಂದ ಆಹಾರಕ್ಕಾಗಿ ಅಲೆಯುವ ಬಡವರಿಗೆ ಸಹಾಯವಾಗಿತ್ತು. ಜೊತೆಗೆ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಮನೆಗಳಿಂದ ಆಹಾರ ತರುವ ತಾಪತ್ರಯ ಇರಲಿಲ್ಲ, ಜೊತೆಗೆ ಹಣವು ಉಳಿತಾಯವಾಗುತ್ತಿತ್ತು ಎಂದು ಮತ್ತೊಬ್ಬ ಮಹಿಳೆ ಧನಲಕ್ಷ್ಮಿ ತಿಳಿಸಿದ್ದಾರೆ,
ವ್ಯಾಪಾರಕ್ಕಾಗಿ ರಸ್ತೆ ರಸ್ತೆ ಸುತ್ತುವ ನಮಗೆ ದೊಡ್ಡ ದೊಡ್ಡ ಹೊಟೇಲ್ ಗಳಿಗೆ ತೆರಳಿ ಹೆಚ್ಚಿನ ಹಣ ಕೊಟ್ಟು ತಿನ್ನಲು ಸಾಧ್ಯವಿಲ್ಲ. ಅಮ್ಮಾ ಕ್ಯಾಂಟೀನ್ ನಮಗೆ ಕಡಿಮೆ ದರದಲ್ಲಿ ಶುಚಿ ರುಚಿಯಾಗಿರುವ ಊಟ ನೀಡುತ್ತಿದೆ ಎಂದು ಹೂವಿನ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.
3 ರುಪಾಯಿಗೆ ಎರಡು ಚಪಾತಿ ನೀಡುತ್ತಿದ್ದರು. ಇದರಿಂದ ಕಡಿಮೆ ಬೆಲೆಯಲ್ಲಿ ನಮ್ಮ ಹೊಟ್ಟೆ ತುಂಬುತ್ತಿತ್ತು. ಅಮ್ಮಾ ಇಂದು ನಮ್ಮೊಂದಿಗಿಲ್ಲ. ಹೀಗಾಗಿ ಮುಂದೇನೋ ಎಂಬ ಚಿಂತೆ ಕಾಡುತ್ತಿದೆ ಎಂದು ಗೋವಿಂದಮ್ಮಾಳ್ ಎಂಬಾಕೆ ಆತಂಕ ವ್ಯಕ್ತ ಪಡಿಸಿದ್ದಾರೆ.
Advertisement