ನವದೆಹಲಿ: ನಿಗೂಢವಾಗಿ ನಾಪತ್ತೆಯಾಗಿ ಹಲವು ದಿನಗಳು ಕಳೆದರೂ ಈ ವರೆಗೂ ಪತ್ತೆಯಾಗದ ಜೆಎನ್ ಯು ವಿದ್ಯಾರ್ಥಿ ನಜೀಬ್ ಅಹ್ಮದ್ ಪ್ರಕರಣವನ್ನು ಇಂದು ತನಿಖೆ ನಡೆಸಿರುವ ನ್ಯಾಯಾಲಯವು ದೆಹಲಿ ಪೊಲೀಸರನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.
ವಿದ್ಯಾರ್ಥಿ ನಾಪತ್ತೆ ಪ್ರಕರಣವನ್ನು ಇಂದು ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್, ವಿದ್ಯಾರ್ಥಿ ನಾಪತ್ತೆಯಾಗಿ 55 ದಿನಗಳು ಕಳೆದಿವೆ. ಈ ವರೆಗೂ ವಿದ್ಯಾರ್ಥಿ ಪತ್ತೆಯಾಗಿಲ್ಲ. ಒಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ಮಾಯವಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ನ್ಯಾಯಾಲಯವು, ವಿದ್ಯಾರ್ಥಿಯನ್ನು ಹುಡುಕುವಲ್ಲಿ ಪೊಲೀಸರು ವಿಫಲವಾಗಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದೆ.
50 ದಿನಗಳು ಕಳೆದರೂ ಈ ವರೆಗೂ ವಿದ್ಯಾರ್ಥಿ ಪತ್ತೆಯಾಗಿಲ್ಲ. ವಿದ್ಯಾರ್ಥಿ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಯಾವುದೇ ಸುಳಿವುಗಳಿಲ್ಲದೆಯೇ ಒಬ್ಬ ವ್ಯಕ್ತಿ ಮಾಯವಾಗಲು ಹೇಗೆ ಸಾಧ್ಯ? ಎಷ್ಟೇ ಕೆಟ್ಟದಾಗಿ ಆಲೋಚನೆ ಮಾಡಿದ್ದರೂ, ಒಂದಲ್ಲ ಒಂದು ಸುಳಿವುಗಳು ಇದ್ದೇ ಇರುತ್ತವೆ. ವಿದ್ಯಾರ್ಥಿ ಈ ವರೆಗೂ ಪತ್ತೆಯಾಗದಿರುವುದಕ್ಕೆ ಬಹಳ ನೋವಾಗುತ್ತಿದೆ.
ವಿದ್ಯಾರ್ಥಿಗಳ ಸಂಘರ್ಷದ ಬಗ್ಗೆ ನಮಗೆ ಬೇಕಿಲ್ಲ. ವಿದ್ಯಾರ್ಥಿ ಪತ್ತೆಯಾಗುವುದಷ್ಟೇ ನಮಗೆ ಮುಖ್ಯವಾಗಿದ್ದು, ನಾಪತ್ತೆಯಾಗಿರುವ ವಿದ್ಯಾರ್ಥಿ ಮರಳಿ ತನ್ನ ಮನೆಗೆ ಸೇರಬೇಕಿದೆ. ತಾಯಿಯೊಬ್ಬಳ ಮಡಿಲಿಗೆ ಮಗು ಸೇರಬೇಕಿರುವುದು ಮುಖ್ಯವಾಗಿದೆ. ಇದೇ ರೀತಿಯ ಬೆಳವಣಿಗೆಗಳು ಮುಂದುವರೆದಿದ್ದೇ ಆದರೆ, ಜನರಲ್ಲಿ ಅಭದ್ರತೆ ಮೂಡುತ್ತದೆ ಎಂದು ಹೇಳಿದೆ.
ಜೆಎನ್ ಯುನಲ್ಲಿ ಬಯೋಟೆಕ್ನಾಲಜಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ನಜೀಬ್ ಅಹ್ಮಮದ್ (27) ಎಂಬ ವಿದ್ಯಾರ್ಥಿ ಕಳೆದ ಅಕ್ಟೋಬರ್ 15 ರಂದು ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದ.
Advertisement