ಸುಪ್ರೀಂ ಕೋರ್ಟ್
ದೇಶ
ನೋಟು ರದ್ಧತಿಯ ಕಾರ್ಯ ನೀತಿ ರೂಪಿಸಿದ್ದು ಯಾರು: ಸುಪ್ರೀಂ ಪ್ರಶ್ನೆ; ನಾವು ಸುಮ್ಮನೆ ಕುಳಿತಿಲ್ಲ: ಕೇಂದ್ರದ ಉತ್ತರ
ಅಧಿಕ ಮೌಲ್ಯದ ನೋಟುಗಳ ಚಲಾವಣೆಯನ್ನು ನಿಲ್ಲಿಸಿರುವ ನಿರ್ಧಾರವನ್ನು ಸಂಪೂರ್ಣ ಗೌಪ್ಯವಾಗಿ ತೆಗೆದುಕೊಳ್ಳಲಾಯಿತೇ ಮತ್ತು ನೀತಿಯನ್ನು ಅನುಷ್ಠಾನಕ್ಕೆ ತಂದಿರುವುದರ ಹಿಂದಿರುವ ತಾರ್ಕಿಕ ಅಂಶವೇನು ಎಂದು...
ನವದೆಹಲಿ: ಅಧಿಕ ಮೌಲ್ಯದ ನೋಟುಗಳ ಚಲಾವಣೆಯನ್ನು ನಿಲ್ಲಿಸಿರುವ ನಿರ್ಧಾರವನ್ನು ಸಂಪೂರ್ಣ ಗೌಪ್ಯವಾಗಿ ತೆಗೆದುಕೊಳ್ಳಲಾಯಿತೇ ಮತ್ತು ನೀತಿಯನ್ನು ಅನುಷ್ಠಾನಕ್ಕೆ ತಂದಿರುವುದರ ಹಿಂದಿರುವ ತಾರ್ಕಿಕ ಅಂಶವೇನು ಎಂದು ವಿವರಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ನೋಟುಗಳ ಅಪಮೌಲ್ಯ ಕುರಿತು ಅನೇಕ ಅರ್ಜಿಗಳು ಸಲ್ಲಿಕೆಯಾಗಿದ್ದು ಅವುಗಳ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ಇಂದು ಸರ್ಕಾರವನ್ನು ಹಲವು ರೀತಿಯಲ್ಲಿ ಪ್ರಶ್ನಿಸಿದೆ.
ಯಾವಾಗ ನೀವು ನೋಟುಗಳ ನಿಷೇಧ ನೀತಿಯನ್ನು ಮಾಡಿದಿರಿ, ಅದನ್ನು ಗೌಪ್ಯವಾಗಿ ಕಾಪಾಡಲಾಗಿತ್ತೇ ಎಂದು ಕೇಳಿದೆ.ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್, ವ್ಯಕ್ತಿ ದಿನಕ್ಕೆ ಬ್ಯಾಂಕಿನಿಂದ 24 ಸಾವಿರ ರೂಪಾಯಿ ಹಣ ಪಡೆಯಬಹುದು ಎಂಬ ನಿಯಮವನ್ನು ಅನುಸರಿಸಿಲ್ಲ ಏಕೆ ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ನೋಟುಗಳನ್ನು ರದ್ದುಪಡಿಸುವ ಮೊದಲು ಜನರ ಅಗತ್ಯಗಳನ್ನು ಭರಿಸಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ವಾದ ಮಂಡಿಸಿದರು.
ಎಟಿಎಂಗಳಲ್ಲಿ ಹಣವಿಲ್ಲ, ಸರಿಯಾದ ಪ್ರಯೋಗ ನಡೆಸಿರಲಿಲ್ಲ ಮತ್ತು ಸಹಕಾರ ಬ್ಯಾಂಕುಗಳು ಮತ್ತು ಇತರ ಬ್ಯಾಂಕುಗಳ ಮಧ್ಯೆ ಬೇಧಭಾವ ಮಾಡಲಾಗಿದೆ ಎಂದರು.ಸರ್ಕಾರಿ ಪರ ವಕೀಲ ಅಟೊರ್ನಿ ಜನರಲ್ ಮುಕುಲ್ ರೊಹಟ್ಗಿ, ಜನರ ಕುಂದುಕೊರತೆಗಳನ್ನು ನಿವಾರಿಸಲು ಸರ್ಕಾರ ಎಲ್ಲಾ ಅಗತ್ಯ ಕ್ರಮ ಕೈಗೊಂಡಿದೆ ಎಂದರು.
ನವೆಂಬರ್ 8ರಂದು ಜಾರಿಗೆ ಬಂದ ನೋಟುಗಳ ನಿಷೇಧದ ನಂತರ ಅನೇಕ ಮಂದಿ ಸರ್ಕಾರದ ಕ್ರಮವನ್ನು ವಿರೋಧಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ಅದರ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ.
ನೋಟುಗಳ ಅಪಮೌಲ್ಯ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ ಗೆ ಪ್ರತಿಕ್ರಿಯೆ ನೀಡಿದ್ದು, ಈ ವಿಷಯದಲ್ಲಿ ಸರ್ಕಾರ ಸುಮ್ಮನೆ ಕೂತಿಲ್ಲ. ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು ಇನ್ನು 10-15 ದಿನಗಳಲ್ಲಿ ಸಮಸ್ಯೆ ಪರಿಹಾರವಾಗಲಿದೆ ಎಂದು ಹೇಳಿದೆ. ಸಹಕಾರಿ ಬ್ಯಾಂಕ್ ಗಳಿಗೂ ನಿಷೇಧ ನಿಯಮ ಅನ್ವಯವಾಗಲಿದ್ದು ಬ್ಯಾಂಕುಗಳು ಮತ್ತು ಎಟಿಎಂಗಳಿಂದ ಹಣ ತೆಗೆಯಲು ಹೇರಿರುವ ಮಿತಿ ಕಾರಣಬದ್ಧವಾಗಿದೆ ಎಂದು ಹೇಳಿದೆ.
ನೋಟುಗಳ ರದ್ದು ಕುರಿತ ಅರ್ಜಿ ವಿಚಾರಣೆ ನಡೆಸುವ ಸಂದರ್ಭದಲ್ಲಿ, ಸಹಕಾರಿ ಬ್ಯಾಂಕುಗಳಲ್ಲಿ ಹಳೆಯ 500 ಮತ್ತು 1000ದ ನೋಟುಗಳನ್ನು ಠೇವಣಿಯಿಡಲು ಅವಕಾಶ ನೀಡುವ ಉದ್ದೇಶ ಸರ್ಕಾರಕ್ಕಿದೆಯೇ ಎಂದು ಪ್ರಶ್ನಿಸಿದೆ. ಅಲ್ಲದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹಳೆಯ ರದ್ದುಗೊಂಡ ನೋಟುಗಳನ್ನು ಬಳಸುವ ದಿನಾಂಕವನ್ನು ವಿಸ್ತರಿಸಿದಿಯೇ ಎಂದು ಮುಂದಿನ ಬುಧವಾರದೊಳಗೆ ಉತ್ತರಿಸುವಂತೆ ಕೋರ್ಟ್ ಸೂಚಿಸಿದೆ.
ಹಳೆಯ 500 ಮತ್ತು 1000ದ ನೋಟುಗಳ ಚಲಾವಣೆಯನ್ನು ಹಿಂತೆಗೆದುಕೊಂಡು ಒಂದು ತಿಂಗಳು ಕಳೆದರೂ ಬ್ಯಾಂಕುಗಳು ಮತ್ತು ಎಟಿಎಂಗಳ ಮುಂದೆ ಇನ್ನೂ ಕೂಡ ಜನರ ಸರದಿ ಕಡಿಮೆಯಾಗಿಲ್ಲ. ನಾಗರಿಕರು ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ನಗದು ಪಡೆಯಲು ಹರಸಾಹಸಪಡುತ್ತಿದ್ದಾರೆ.
ಸರ್ಕಾರದ ಈ ನಿರ್ಧಾರದಿಂದ ಜನರಿಗೆ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿರುವವರಿಗೆ ಸಮಸ್ಯೆಗಳುಂಟಾಗುತ್ತಿದೆ. ಅನೇಕ ಮಂದಿ ನಗದು ವಹಿವಾಟು ನಡೆಸುವುದರಿಂದ ಭಾರೀ ಸಮಸ್ಯೆಯಾಗುತ್ತಿದೆ ಎಂದು ಭಾರೀ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ.
ಇದಕ್ಕೆ ಉತ್ತರಿಸಿರುವ ಸರ್ಕಾರ, ದೇಶದಲ್ಲಿ ಕಪ್ಪು ಹಣ ಸಂಗ್ರಹಣೆಯನ್ನು ಬುಡ ಸಮೇತ ಕಿತ್ತೊಗೆಯಲು ಮತ್ತು ಭಯೋತ್ಪಾದಕರು ನಕಲಿ ನೋಟುಗಳನ್ನು ಸಂಗ್ರಹಿಸಿ ಚಲಾವಣೆಗೆ ಬಳಸುವುದನ್ನು ತಪ್ಪಿಸುವುದು ನೋಟು ನಿಷೇಧದ ಹಿಂದಿನ ಉದ್ದೇಶ ಎಂದಿದೆ. ನೋಟುಗಳ ನಿಷೇಧದಿಂದ ದೀರ್ಘಾವಧಿಗೆ ಭವಿಷ್ಯದಲ್ಲಿ ಪ್ರಯೋಜನವಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ