ನವದೆಹಲಿ: ಎಟಿಎಂಗೆ ಹಣ ಸಾಗಿಸುತ್ತಿದ್ದ ವ್ಯಾನ್ ವೊಂದರಲ್ಲಿದ್ದ ಐದು ಲಕ್ಷ ರುಪಾಯಿ ದರೋಡೆ ಮಾಡಿದ ಘಟನೆ ಸೋಮವಾರ ಪೂರ್ವ ದೆಹಲಿಯ ಪಾಂಡವನಗರದಲ್ಲಿ ನಡೆದಿದೆ.
ಇಂದು ಮಧ್ಯಾಹ್ನ 2.25ಕ್ಕೆ ಈ ಘಟನೆ ನಡೆದಿದ್ದು, ಕ್ಯಾಶ್ ವ್ಯಾನ್ ನ ಚಾಲಕ ಹಣವನ್ನು ವ್ಯಾನ್ ನಿಂದ ಎಸ್ ಬಿಐ ಎಟಿಗೆ ಸಾಗಿಸುತ್ತಿದ್ದ ವೇಳೆ ದುಷ್ಕರ್ಮಿಗಳು ದರೋಡೆ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಚಾಲಕನ ಬಳಿ ಇದ್ದ ಹಣದ ಬ್ಯಾಗ್ ಅನ್ನು ಕಸಿದು ಪರಾರಿಯಾಗಿದ್ದು, ಆರೋಪಿಗಳು ತಲೆಗೆ ಹೆಲ್ಮೆಟ್ ಧರಿಸಿದ್ದರಿಂದ ಚಾಲಕನಿಗೆ ಅವರ ಮುಖ ನೋಡಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.
ಚಾಲಕನೊಂದಿಗೆ ಓರ್ವ ಭದ್ರತಾ ಸಿಬ್ಬಂದಿ ಸಹ ಇದ್ದರು. ಆದರೆ ಆರೋಪಿಗಳು ಕ್ಷಣಾರ್ಧದಲ್ಲೇ ಬ್ಯಾಗ್ ಕಸಿದು ಪರಾರಿಯಾಗಿದ್ದರಿಂದ ಏನೂ ಮಾಡಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.