ಟೆಲಿಫೋನ್ ಟವರ್ ಹತ್ತಿ ಬಿ.ಟೆಕ್ ಪದವೀಧರನಿಂದ ಪ್ರತಿಭಟನೆ

ಇಲ್ಲೊಬ್ಬರು ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿ ಸುದ್ದಿಯಾಗಿದ್ದಾರೆ. ಆಂಧ್ರಪ್ರದೇಶದ ವಿಜಯವಾಡದ ರಾಮವರಪ್ಪಡುವಿನಲ್ಲಿ...
ದೂರವಾಣಿ ಟವರ್ ಗೆ ಹತ್ತಿ ಪ್ರತಿಭಟಿಸುತ್ತಿರುವ ಬಿ.ಟೆಕ್ ಪದವೀಧರ ರವಿತೇಜ
ದೂರವಾಣಿ ಟವರ್ ಗೆ ಹತ್ತಿ ಪ್ರತಿಭಟಿಸುತ್ತಿರುವ ಬಿ.ಟೆಕ್ ಪದವೀಧರ ರವಿತೇಜ

ವಿಜಯವಾಡ: ಇಲ್ಲೊಬ್ಬರು ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿ ಸುದ್ದಿಯಾಗಿದ್ದಾರೆ. ಆಂಧ್ರಪ್ರದೇಶದ ವಿಜಯವಾಡದ ರಾಮವರಪ್ಪಡುವಿನಲ್ಲಿ ಬಿ.ಟೆಕ್ ಪದವೀಧರನೊಬ್ಬ ದೂರವಾಣಿ ಟವರ್ ಗೆ ಹತ್ತಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಜಾತಿಯ ಆಧಾರದ ಬದಲಿಗೆ ಆರ್ಥಿಕ ಸ್ಥಿತಿಗತಿಯನ್ನು ಪರಿಗಣಿಸಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿದ್ದಾನೆ.

ಬಿ.ಟೆಕ್ ಪದವೀಧರ ರವಿತೇಜ ಮತ್ತು ಇತರ ವಿದ್ಯಾರ್ಥಿಗಳ ಗುಂಪು  ಉದ್ಯೋಗ ಮತ್ತು ಶಿಕ್ಷಣದಲ್ಲಿ ಜಾತಿಗೆ ಬದಲಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕೆಂದು ಮತ್ತು ಅತಿ ಬಡವರ್ಗದ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಾಂತರ ಪ್ರದೇಶಗಳಿಂದ ಬಂದವರಿಗೆ ಪರೀಕ್ಷೆಗಳಲ್ಲಿ ಶೇಕಡಾ 10ರಷ್ಟು ಬೋನಸ್ ಅಂಕ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆಯಲು ರವಿತೇಜ ದೂರವಾಣಿ ಟವರ್ ಹತ್ತಿದ್ದಾನೆ. ಆದರೆ ಪೊಲೀಸರ ಕಣ್ಣಿಗೆ ಬಿದ್ದಿರಲಿಲ್ಲ.

ಟವರ್ ನ ಮುಕ್ಕಾಲು ಭಾಗದವರೆಗೆ ಹತ್ತಿ ಕುಳಿತುಕೊಂಡ ರವಿತೇಜ ತನ್ನ ಬೇಡಿಕೆಗಳ ಪಟ್ಟಿಯನ್ನು ಕಾಗದದಲ್ಲಿ ಬರೆದು ಕೆಳಗೆ ಹಾಕಿದನು. ಆಗ ಪೊಲೀಸರು ಅವನು ಮೇಲೆ ಹತ್ತಿದ್ದನ್ನು ನೋಡಿದ್ದಾರೆ.

ಇದೀಗ ಪೊಲೀಸರಿಗೆ ರವಿತೇಜನದ್ದೇ ಚಿಂತೆಯಾಗಿದೆ. ತನ್ನ ಬೇಡಿಕೆ ಈಡೇರುವವರೆಗೆ ತಾನು ಕೆಳಗೆ ಇಳಿಯುವುದಿಲ್ಲ. ಯಾರಾದರೂ ತನ್ನನ್ನು ಕೆಳಗಿಳಿಸಲು ಪ್ರಯತ್ನಿಸಿದರೆ ಮೇಲಿನಿಂದ ಕೆಳಗೆ ಹಾರುವುದಾಗಿ ಬೆದರಿಕೆ ಹಾಕಿದ್ದಾನೆ.

ಪೊಲೀಸರು ಹೇಗೋ ಪ್ರಯತ್ನ ಮಾಡಿ ರವಿತೇಜನ ಮೊಬೈಲ್ ಸಂಖ್ಯೆಯನ್ನು ಪತ್ತೆಹಚ್ಚಿ ಕೆಳಗಿಳಿದುಬರುವಂತೆ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವನು ಮಾತ್ರ ಸುತಾರಾಂ ಒಪ್ಪುತ್ತಿಲ್ಲ.

ರವಿತೇಜನು ಯಾವುದೇ ಕ್ಷಣದಲ್ಲಿ ಕೆಳಗೆ ಹಾರಲು ಸಾಧ್ಯತೆಯಿರುವುದರಿಂದ ಬಿದ್ದು ಏಟಾಗಬಾರದೆಂದು ಟವರ್ ಸುತ್ತಲೂ ನೆಟ್ ಅಳವಡಿಸಿದ್ದಾರೆ. ನಟ ಪವನ್ ಕಲ್ಯಾಣ್ ಕೂಡ ತಮ್ಮ ಬೇಡಿಕೆಗೆ ದನಿಗೂಡಿಸಬೇಕೆಂದು ರವಿತೇಜ ಒತ್ತಾಯಿಸಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com