ಹರ್ಯಾಣ: ಗೋಮಾಂಸ ತಿನ್ನದೆ ಬದುಕಲು ಸಾಧ್ಯವೇ ಇಲ್ಲ ಎನ್ನುವವರು ಹರ್ಯಾಣಕ್ಕೆ ಬರಬೇಡಿ. ಇಲ್ಲಿ ಗೋಮಾಂಸಕ್ಕೆ ನಿಷೇಧವಿದ್ದು, ಗೋರಕ್ಷಣಾ ಕಾನೂನಿಗೆ ರಾಜ್ಯ ಬದ್ಧವಾಗಿದೆ ಎಂದು ಹರ್ಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಬುಧವಾರ ಹೇಳಿಕೆ ನೀಡಿದ್ದಾರೆ.
ಕೆಲವೊಂದು ದೇಶಗಳಲ್ಲಿ ಅವರ ಆಹಾರ ಪದ್ಧತಿಗಳು ನಮಗೆ ಸರಿಹೋಗದಿದ್ದರೆ ನಾವು ಆ ದೇಶಕ್ಕೆ ಭೇಟಿ ಕೊಡುವುದಿಲ್ಲ. ಅದೇ ರೀತಿ ಗೋಮಾಂಸ ತಿನ್ನದೆ ಇರಲಾಗುವುದಿಲ್ಲ ಎಂಬವರು ನಮ್ಮ ರಾಜ್ಯಕ್ಕೆ ಬರುವುದು ಬೇಡ ಎಂದು ಮಾಧ್ಯಮದವರಲ್ಲಿ ಮಾತನಾಡಿದ ವಿಜ್ ಹೇಳಿದ್ದಾರೆ.
ಅದೇ ವೇಳೆ ಹರ್ಯಾಣಕ್ಕೆ ಭೇಟಿ ನೀಡುವ ವಿದೇಶಿಗರಿಗೆ ಮಾಂಸ ಸೇವನೆ ಮಾಡಲು ಅನುಮತಿ ನೀಡಲಾಗುವುದು ಮಾತ್ರವಲ್ಲದೆ ಗೋಮಾಂಸ ನಿಷೇಧ ಕಾನೂನಿನಲ್ಲಿ ಅಲ್ಪ ಸಡಿಲಿಕೆ ಮಾಡಲಾಗುತ್ತದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಅಂಥದ್ದೇನೂ ಮಾಡುವುದಿಲ್ಲ ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸೋಮವಾರ ಸ್ಪಷ್ಟನೆ ನೀಡಿದ್ದಾರೆ.