ನವದೆಹಲಿ: ಶರಣಾಗಲು ನಮಗೆ ಪೂರ್ಣ ಭದ್ರತೆ ನೀಡಬೇಕು ಎಂದು ಕೋರಿ ಜವಾಹಾರ್ ಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್ ಯು) ವಿದ್ಯಾರ್ಥಿ ಉಮರ್ ಖಾಲೀದ್ ಸೇರಿ ಐವರು ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಜೆಎನ್ ಯು ವಿವಾದಕ್ಕೆ ಸಂಬಂಧಿಸಿದಂತೆ ಉಮರ್ ಖಾಲೀದ್ ಮತ್ತು ಇನ್ನು ನಾಲ್ವರು ವಿದ್ಯಾರ್ಥಿಗಳ ವಿರುದ್ಧ ದೆಹಲಿ ಪೊಲೀಸರು ಲುಕೌಟ್ ನೋಟೀಸ್ ಹೊರಡಿಸಿದ್ದರು. ಈ ಹಿನ್ನಲೆಯಲ್ಲಿ ನಮಗೆ ಪೂರ್ಣ ಭದ್ರತೆ ನೀಡಿದರೆ ಶರಣಾಗುತ್ತೇವೆ ಎಂದು ಹೇಳಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಜವಾಹರ್ಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಫೆ. 9ರಂದು ದೇಶ ವಿರೋಧಿ ಘೋಷಣೆ ಕೂಗಿದ್ದಾರೆ ಎಂದು ಶಂಕಿಸಿ ಉಮರ್ ಖಾಲೀದ್, ಅನಂತ್ ಪ್ರಕಾಶ್ ನಾರಾಯಣ್, ಅಶುತೋಷ್ ಕುಮಾರ್, ರಾಮನಾಗ ಮತ್ತು ಅನಿರ್ಬನ್ ಭಟ್ಟಾಚಾರ್ಯ ವಿರುದ್ಧ ಲುಕೌಟ್ ನೋಟೀಸ್ ಜಾರಿ ಮಾಡಿದ್ದರು.
ಭಾನುವಾರ ಸಂಜೆ ನಾಪತ್ತೆಯಾಗಿದ್ದ ಜೆಎನ್ ಯು ವಿದ್ಯಾರ್ಥಿಗಳು ವಾಪಸ್ಸಾಗಿದ್ದರು. ದೆಹಲಿ ಪೊಲೀಸ್ ಆಯುಕ್ತ ಭೀಮ್ ಸೇನ್ ಬಸ್ಸಿ ಅವರು, ವಾಪಸ್ಸಾದ ವಿದ್ಯಾರ್ಥಿಗಳು ತನಿಖೆ ಸಹಕರಿಸಬೇಕು. ಅವರು ಅಮಾಯಕರಾಗಿದ್ದಲ್ಲಿ, ಸಾಕ್ಷ್ಯಗಳನ್ನು ಒದಗಿಸಲಿ ಎಂದು ಹೇಳಿದ್ದರು.