ಚೆನ್ನೈ: ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಜೈಲು ವಾಸದಲ್ಲಿರುವ ನಳಿನಿ ತನ್ನನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವಂತೆ ಕೋರಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಬುಧವಾರ ಮನವಿಯೊಂದನ್ನು ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.
ರಾಜೀವ್ ಗಾಂಧಿ ಅವರನ್ನು ಹತ್ಯೆಗೈದ 7 ಹಂತಕರ ಪೈಕಿ ನಳಿನಿ ಶ್ರೀಹರನ್ ಗೆ ನಿನ್ನೆಯಷ್ಟೇ 12 ಗಂಟೆಗಳ ಕಾಲ ಪೆರೋಲ್ ನೀಡಲಾಗಿತ್ತು. ಇದರಂತೆ ತಂದೆ ಶಂಕರ ನಾರಾಯಣನ್ ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದರು.
ನಂತರ ತಮ್ಮ ಜೈಲುವಾಸ ಕುರಿತಂತೆ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಮನವಿ ಮಾಡಿಕೊಂಡಿರುವ ನಳಿನಿ, ಪ್ರಕರಣ ಸಂಬಂಧ ಈಗಾಗಲೇ ನಾವು 25 ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿದ್ದೇವೆ. ಬಂಧನಕ್ಕೊಳಗಾಗಿರುವ ನಾವು 7 ಮಂದಿ ಮುಗ್ಧರು. ನಮ್ಮ ಕಷ್ಟವನ್ನು ನಿವಾರಿಸಿ. ನಮ್ಮ ಶಿಕ್ಷೆಯನ್ನು ಕಡಿಮೆ ಮಾಡಿ. ನಮಗೆ ಜಯಲಲಿತಾ ಅವರು ಸಹಾಯ ಮಾಡುತ್ತಾರೆಂಬುದರ ಕುರಿತಂತೆ ನಂಬಿಕೆಯಿದೆ ಎಂದು ಹೇಳಿಕೊಂಡಿದ್ದಾರೆ.
ಪ್ರಕರಣ ಸಂಬಂಧ ನಾವು ಮುಗ್ಧರು ಎಂಬುರು ಎಲ್ಲರಿಗೂ ಗೊತ್ತಿದೆ. ನಾವು ಬಂಧಿನಕ್ಕೊಳಗಾದಾಗ ನಮ್ಮ ಕೈಗಳು ರಕ್ತಮಯವಾಗಿರಲಿಲ್ಲ. ರಾಜೀವ್ ಗಾಂಧಿಯವರು ನೋಡಲು ಹೇಗಿರುತ್ತಾರೆಂಬುದೇ ನಮಗೆ ಗೊತ್ತಿರಲಿಲ್ಲ. ನಾವು ಈಗಾಗಲೇ 25 ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿದ್ದು, ನಮ್ಮ ಮನವಿಯನ್ನು ಸ್ವೀಕರಿಸಿ. ನನಗೆ 24 ವರ್ಷದ ಒಬ್ಬಳು ಮಗಳಿದ್ದಾಳೆ. ಕನಿಷ್ಟ ಪಕ್ಷ ನನ್ನ ಮಗಳಿಗಾದರೂ ನಾನು ಹೊರ ಬರಬೇಕು. ನನಗೆ ಮುಖ್ಯಮಂತ್ರಿ ಮೇಲೆ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣ ಅಫರಾಧಿ ನಳಿನಿಗೆ 1998ರಲ್ಲಿ ಜನವರಿ 28ರಂದು ಮರಣದಂಡನೆ ವಿಧಿಸಲಾಗಿತ್ತು. ಆದರೆ, ತಮಿಳುನಾಡು ರಾಜ್ಯಪಾಲರು 2000ನೇ ಏಪ್ರಿಲ್ 24ರಂದು ಜೀವವಾಧಿ ಶಿಕ್ಷೆಯಾಗಿ ಪರಿವರ್ತಿಸಿ ಆದೇಶ ಹೊರಡಿಸಿದ್ದರು.
Advertisement