ರೇಪ್ ಮಾಡಿದ್ದನ್ನು ಕಣ್ಣಾರೆ ನೋಡಿದ್ದೇವೆ
ಸೋನಿಪಟ್: ಮೀಸಲಾತಿಗಾಗಿ ಒತ್ತಾಯಿಸಿ ಜಾಟ್ ಸಮುದಾಯ ನಡೆಸಿದ ಪ್ರತಿಭಟನೆ ವೇಳೆ ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ, ಹಸ್ಸಾನ್ಪುರದಲ್ಲಿ ಜಾಟ್ ಪ್ರತಿಭಟನಾಕಾರರು ಮಹಿಳೆಯರನ್ನು ವಾಹನದಿಂದ ಹೊರಗೆಳೆದು, ಲೈಂಗಿಕ ದೌರ್ಜನ್ಯ ನಡೆಸಿದ್ದನ್ನು ನಾವು ಕಣ್ಣಾರೆ ಕಂಡಿದ್ದೇವೆ ಎಂದು ಮೂವರು ಟ್ರಕ್ ಚಾಲಕರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಮಾರ್ಥಲ್ ಸಮೀಪದ ಹಸ್ಸಾನ್ಪುರ್ ಗ್ರಾಮದಲ್ಲಿ ಯಾವುದೇ ಪ್ರತ್ಯಕ್ಷದರ್ಶಿಗಳಾಗಲಿ, ಸಂತ್ರಸ್ತರಾಗಲಿ ವಿವರ ನೀಡಲು ಮುಂದೆ ಬರಲೇ ಇಲ್ಲ ಎಂದು ಸ್ಥಳ ಪರೀಶೀಲನೆಗೆ ತೆರಳಿದ್ದ ಮಹಿಳಾ ಪೊಲೀಸ್ ಅಧಿಕಾರಿಗಳ ತಂಡ ತಿಳಿಸಿದೆ.
ಸೋನಿಪಟ್ನಲ್ಲಿ ಮಾತನಾಡಿದ ಚಾಲಕರಾದ ಸುಖ್ವಿಂದರ್ ಸಿಂಗ್, ನಿರಂಜನ್ ಮತ್ತು ನರೇಶ್ ಕುಮಾರ್, ಜಾಟ್ ಪ್ರತಿಭಟನಾಕಾರರು ಹಸ್ಸಾನ್ಪುರದಲ್ಲಿ ತಮ್ಮ ಟ್ರಕ್ಗಳಿಗೆ ಹಾನಿ ಮಾಡಿದ್ದಲ್ಲದೆ, ತಮ್ಮ ಮೇಲೆ ಹಲ್ಲೆ ನಡೆಸಿದರು. ನಂತರ ಪ್ರತಿಭಟನಾಕಾರರು ಮಹಿಳೆಯರನ್ನು ವಾಹನದಿಂದ ಹೊರಗೆಳೆದು, ಅವರ ಬಟ್ಟೆಗಳನ್ನು ಹರಿದು, ಲೈಂಗಿಕ ದೌರ್ಜನ್ಯ ನಡೆಸಿದರು. ಇದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಸಾಮಾನ್ಯ ಉಡುಪಿನಲ್ಲಿದ್ದ ಪೊಲೀಸರು, ಬಾಯಿ ಬಿಡದೆ ಮೌನವಾಗಿರುವಂತೆ ಆ ಮಹಿಳೆಯರ ಮೇಲೆ ಒತ್ತಡ ಹಾಕುತ್ತಿದ್ದರು ಎಂದು ಸುಖ್ವಿಂದರ್ ಸಿಂಗ್ ತಿಳಿಸಿದ್ದಾರೆ.
ಡಿಐಜಿ ಡಾ. ರಾಜ್ಶ್ರೀ ಸಿಂಗ್ ನೇತೃತ್ವದ ಮಹಿಳಾ ಪೊಲೀಸ್ ಅಧಿಕಾರಿಗಳ ತಂಡ ಶನಿವಾರ ಹಸ್ಸಾನ್ಪುರ್ ಗ್ರಾಮಕ್ಕೆ ಭೇಟಿ ನೀಡಿದ್ದ ದಿನವೇ ಚಾಲಕರು ಈ ಹೇಳಿಕೆ ನೀಡಿರುವುದು ಪ್ರಕರಣಕ್ಕೆ ಹೊಸ ತಿರುವು ಬಂದಿದೆ.