ನವದೆಹಲಿ: ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಪ್ರಕರಣ ಸಂಬಂಧ ಈಗಾಗಲೇ ಎಚ್ಚರಿಕೆ ವಹಿಸಿರುವ ಅಲ್ಲಿನ ಅಂಗಡಿಗಳ ಮಾಲೀಕರು ಇದೀಗ ವಿದ್ಯಾರ್ಥಿಗಳು ತರುವ ಭಿತ್ರಿಪತ್ರಗಳ ಮುದ್ರಣಕ್ಕೆ ನಿರಾಕರಿಸುತ್ತಿರುವುದಾಗಿ ತಿಳಿದುಬಂದಿದೆ.
ಭಿತ್ತಿಪತ್ರಗಳ ಮುದ್ರಣಕ್ಕೆ ನಿರಾಕರಿಸುತ್ತಿರುವ ಅಂಗಡಿ ಮಾಲೀಕರು, ಮೊದಲು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯಿಂದ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಅನುಮತಿ ಪತ್ರ ತಂದರೆ ಮಾತ್ರ ಮುದ್ರಿಸುತ್ತೇವೆಂದು ಹೇಳುತ್ತಿದ್ದಾರೆಂದು ವಿದ್ಯಾರ್ಥಿಗಳು ಆರೋಪ ವ್ಯಕ್ತಪಡಿಸಿದ್ದಾರೆ.
ನಿನ್ನೆ ನಾಗರಿಕ ಉಡುಪು ಧರಿಸಿ ಇಬ್ಬರು ಪೊಲೀಸರು ಅಂಗಡಿಗೆ ಬಂದಿದ್ದರು. ಈ ವೇಳೆ ಅಂಗಡಿಯಲ್ಲಿ ಮುದ್ರಣವಾದ ಭಿತ್ತಿಪತ್ರಗಳನ್ನು ಗುರ್ತಿಸುವಂತೆ ತಿಳಿಸಿದರು. ಇದಕ್ಕುತ್ತರಿಸಿದ ನಾನು ವಿದ್ಯಾರ್ಥಿಗಳು ಏನೇ ತಂದರು ಅದನ್ನು ನಾವು ಓದುವುದಿಲ್ಲ. ಅವರು ಎಷ್ಟು ಸಂಖ್ಯೆಯ ಮುದ್ರಣವನ್ನು ಕೇಳುತ್ತಾರೆಂಬುದನ್ನು ಕೇಳಿಕೊಂಡು ಮುದ್ರಿಸುತ್ತೇವೆ ಎಂದು ಹೇಳಿದೆ
ವಿವಾದಕ್ಕೆ ಸಂಬಂಧಿಸಿ ಇಲ್ಲಿನ ಸಾಕಷ್ಟು ಅಂಗಡಿಗಳನ್ನು ವಿಚಾರಣೆ ನಡೆಸಲಾಗಿತ್ತು. ನಾವು ಹೊಟ್ಟೆ ಹಾಗೂ ಬಟ್ಟೆಗಾಗಿ ದುಡಿಯುವವರು ನಮಗೆ ಯಾವುದೇ ರಾಜಕೀಯ ಬೇಡ. ನಮಗೆ ಯಾರೂ ಮುದ್ರಣ ಮಾಡಬೇಡಿ ಎಂದು ಹೇಳಿಲ್ಲ. ನಾವಾಗಿಯೇ ಮುದ್ರಣಕ್ಕೆ ನಿಯಮವನ್ನು ಹಾಕಿಕೊಂಡಿದ್ದೇವೆ. ವಿವಿ ಆಡಳಿತ ಮಂಡಳಿಯಿಂದ ಅನುಮತಿ ಪಡೆದ ನಂತರವಷ್ಟೇ ಭಿತ್ತಿಪತ್ರಗಳಿನ್ನು ಮುದ್ರಣ ಮಾಡಿಕೊಡಲಾಗುತ್ತದೆ ಎಂದು ಅಂಗಡಿಯ ಮಾಲೀಕರು ಹೇಳಿಕೊಂಡಿದ್ದಾರೆ.
ಆದರೆ, ಅಂಗಡಿ ಮಾಲೀಕರ ಈ ಹೇಳಿಕೆಯನ್ನು ತಿರಸ್ಕರಿಸುವ ವಿದ್ಯಾರ್ಥಿಗಳು, ನಮ್ಮ ಗಮನಕ್ಕೆ ಬಂದಿರುವ ಪ್ರಕಾರ ವಿವಿ ಅಧಿಕಾರಿಗಳು ಅಂಗಡಿಯ ಮಾಲೀಕರಿಗೆ ತಮ್ಮ ಅನುಮತಿ ಇಲ್ಲದೆ ವಿದ್ಯಾರ್ಥಿ ಸಂಘಟನೆಗಳು ತರುವ ಪತ್ರಗಳನ್ನು ಮುದ್ರಣ ಮಾಡದಂತೆ ಸೂಚಿಸಿದ್ದಾರೆ. ಹೀಗಾಗಿ ಅಂಗಡಿ ಮಾಲೀಕರು ಈ ರೀತಿಯಾಗಿ ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಆರೋಪದ ಕುರಿತಂತೆ ಮಾತನಾಡಿರುವ ವಿವಿಯ ರಿಜಿಸ್ಟ್ರಾರ್ ಬುಪಿಂದರ್ ಜುತ್ಶಿ ಅವರು, ನಾವು ಯಾವುದೇ ಅಂಗಡಿಗೂ ಯಾವುದೇ ರೀತಿಯ ಸೂಚನೆಗಳನ್ನು ನೀಡಿಲ್ಲ. ಅಂಗಡಿಯವರು ಅವರ ಇಚ್ಛೆಯಂತೆ ವ್ಯಾಪಾರವನ್ನು ನಡೆಸುತ್ತಿದ್ದಾರೆ. ಮುದ್ರಣ ಮಾಡುವುದು ಬಿಡುವುದು ಅವರ ವೈಯಕ್ತಿಕ ನಿರ್ಧಾರ. ಇದಕ್ಕೂ ವಿವಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
Advertisement