ಖಮ್ಮಂ: ಛತ್ತೀಸ್ ಗಢ-ತೆಲಂಗಾಣ ಗಡಿಯಲ್ಲಿ ಇಂದು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 8 ಮಾವೋವಾದಿಗಳು ಮೃತಪಟ್ಟಿದ್ದು, ಆ ಪೈಕಿ ತೆಲಂಗಾಣ ರಾಜ್ಯ ಮಾವೋವಾದಿ ಕಾರ್ಯದರ್ಶಿ ಯಪ್ಪ ನಾರಾಯಣ ಅಲಿಯಾಸ್ ಹರಿ ಭೂಷಣ್ ಮೃತಪಟ್ಟಿರುವ ಸಾಧ್ಯತೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಮೃತ ಮಾವೋವಾದಿಗಳ ಗುರುತು ಪತ್ತೆ ಹಚ್ಚಿದ ನಂತರ ಅಧಿಕೃತ ಮಾಹಿತಿ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹರಿ ಭೂಷಣ್ ವಾರಂಗಲ್ ಜಿಲ್ಲೆಯ ಕೊತ್ತಗುಡ ಮಂಡಲದ ಮಾಡಿಗುಡೆಮ್ ಹಳ್ಳಿಯವರಾಗಿದ್ದು, ಕರೀಂನಗರದಲ್ಲಿ ಮಾವೋವಾದಿ ಚುಟುವಟಿಕೆಯಲ್ಲಿ ತೊಡಗಿದ್ದ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ತೆಲಂಗಾಣ-ಛತ್ತೀಸ್ ಗಢ ಗಡಿಯಲ್ಲಿರುವ ಬಿಜಾಪೂರ್ ಜಿಲ್ಲೆಯ ಬಟೇಟಂಗ್ ಗ್ರಾಮದ ಬಳಿಯಲ್ಲಿ ಈ ಎನ್ ಕೌಂಟರ್ ನಡೆದಿದ್ದು, 8 ಮಂದಿ ಮಾವೋವಾದಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗ್ರಾಮದ ಸಮೀಪವಿರುಣ ಅರಣ್ಯದಲ್ಲಿ ನಕ್ಸಲರು ಅಡಗಿರುವ ಕುರಿತು ಖಚಿತ ಮಾಹಿತಿ ಪಡೆದ ತೆಲಂಗಾಣ ಪೊಲೀಸರು ಛತ್ತೀಸ್ ಗಢ ಪೊಲೀಸರ ನೆರವಿನೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದರು.
ಈ ವೇಳೆ ಪೊಲೀಸರ ಬರುವಿಕೆಯನ್ನು ಮನಗಂಡ ಮಾವೋವಾದಿಗಳು ಏಕಾಏಕಿ ಪೊಲೀಸರತ್ತ ಮನಸೋ ಇಚ್ಛೆ ಗುಂಡಿನ ಸುರಿಮಳೆಗರೆದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿದಾಗ 8 ಮಂದಿ ಮಾವೋವಾದಿಗಳು ಹತರಾದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಪ್ರದೇಶದಲ್ಲಿ 9 ಶಸ್ತ್ರಾಸ್ತಗಳು ಮತ್ತು ಬುಲೆಟ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪೈಕಿ ಎನ್ ಎಲ್ ಆರ್ ರೈಫಲ್, ಎಕೆ47 ಬಂದೂಕು ಮತ್ತು ಕೆಲ ಸ್ವದೇಶಿ ಬಾಂಬ್ ಗಳು ಸೇರಿವೆ ಎಂದು ತಿಳಿದುಬಂದಿದೆ.
Advertisement