ದಾಳಿಗೂ ಮುನ್ನ ಎಸ್ ಪಿ ಅಪಹರಿಸಿ ವಾಹನ, ಗನ್ ಕಸಿದಿದ್ದ ಉಗ್ರರು

ವಾಯುನೆಲೆ ಮೇಲೆ ದಾಳಿ ನಡೆಸುವುದಕ್ಕೂಮುನ್ನವೇ ಸಂಚು ರೂಪಿಸಿದ್ದ ಉಗ್ರರ ಗುಂಪು ನಿನ್ನೆಯಷ್ಟೇ ಎಸ್ ಪಿಯನ್ನು ಅಪಹರಿಸಿ ಅವರ ಬಳಿಯಿದ್ದ ವಾಹನ ಹಾಗೂ ಗನ್'ನ್ನು ಕಸಿದುಕೊಂಡಿದ್ದರು...
ಅಪಹರಣಕ್ಕೊಳಗಾದ ಎಸ್ ಪಿ ಸಲ್ವಿಂದರ್ ಸಿಂಗ್
ಅಪಹರಣಕ್ಕೊಳಗಾದ ಎಸ್ ಪಿ ಸಲ್ವಿಂದರ್ ಸಿಂಗ್

ನವದೆಹಲಿ: ವಾಯುನೆಲೆ ಮೇಲೆ ದಾಳಿ ನಡೆಸುವುದಕ್ಕೂಮುನ್ನವೇ ಸಂಚು ರೂಪಿಸಿದ್ದ ಉಗ್ರರ ಗುಂಪು ನಿನ್ನೆಯಷ್ಟೇ ಎಸ್ ಪಿಯನ್ನು ಅಪಹರಿಸಿ ಅವರ ಬಳಿಯಿದ್ದ ವಾಹನ ಹಾಗೂ ಗನ್'ನ್ನು ಕಸಿದುಕೊಂಡಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

ಸಲ್ವಿಂದರ್ ಸಿಂಗ್ ಅಪಹರಣಕ್ಕೊಳಗಾದ ಎಸ್ ಪಿಯಾಗಿದ್ದು, ಬಂದೂಕುಗಳನ್ನು ಹಿಡಿದಿದ್ದ ಐವರು ಉಗ್ರರು ಅಪಹರಿಸಿದ್ದರು ಎಂದು ತಿಳಿದುಬಂದಿತ್ತು. ಆದರೆ, ಅಪಹರಣವಾದ ಕೆಲವೇ ಗಂಟೆಗಳಲ್ಲಿ ಸಲ್ವಿಂದರ್ ಸಿಂಗ್ ಅವರಿಗೆ ಚೆನ್ನಾಗಿ ಥಳಿಸಿ ಅವರ ಬಳಿಯಿದ್ದ ವಾಹನ ಹಾಗೂ ಪಿಸ್ತೂಲನ್ನು ಕಸಿದು ಪರಾರಿಯಾಗಿದ್ದರು.

ಅಪಹರಣದಿಂದ ಮುಕ್ತರಾದ ನಂತರ ಪ್ರತಿಕ್ರಿಯೆ ನೀಡಿದ್ದ ಅವರು, ನನ್ನ ಗೆಳೆಯ ಹಾಗೂ ಕಿರಿಯ ಸಹೋದ್ಯೋಗಿಯೊಂದಿಗೆ ಗುರುವಾರ ರಾತ್ರಿ ವಾಹನದಲ್ಲಿ ದೇವಾಲಯಕ್ಕೆ ಹೋಗಿದ್ದೆವು. ಈ ವೇಳೆ ಗುರುದಾಸ್ ಪುರದ ದೀನಾನಗರದ ರಸ್ತೆ ಬಳಿ ವಾಹನವನ್ನು ತಡೆದ ಐವರು ವ್ಯಕ್ತಿಗಳ ಗುಂಪೊಂದು ವಾಹನ ಹತ್ತಲು ಯತ್ನಿಸಿದರು. ವಾಹನದಲ್ಲಿದ್ದವರನ್ನು ಥಳಿಸಲು ಆರಂಭಿಸಿದ್ದರು. ನಂತರ ಐವರಲ್ಲಿ ಓರ್ವ ವ್ಯಕ್ತಿ ತಾನೇ ವಾಹನವನ್ನು ಚಲಾಯಿಸಲು ಆರಂಭಿಸಿದ್ದನು. ವಾಹನ ಚಲಾಯಿಸುತ್ತಿರುವಾಗಲೇ ರಸ್ತೆ ಮಧ್ಯಯಲ್ಲೇ ನನ್ನನ್ನು ಕೆಳಗೆ ತಳ್ಳಿದರು. ನಂತರ ನನ್ನ ಸಹೋದ್ಯೋಗಿ ಹಾಗೂ ಗೆಳೆಯನನ್ನು ಉಗ್ರರು ಹೊತ್ತೊಯ್ದಿದ್ದರು. ಎಂದು ಹೇಳಿಕೊಂಡಿದ್ದರು.

ಎಸ್ ಪಿ ನೀಡಿದ ಮಾಹಿತಿಯನ್ನು ಸಂಗ್ರಹಿಸಿದ್ದ ಸಿಬ್ಬಂದಿಗಳು ಉಗ್ರರನ್ನು ಹಿಡಿಯಲು ಕಾರ್ಯಾಚರಣೆಗಿಳಿದಿತ್ತು. ಈ ವೇಳೆ ವಾಹನವನ್ನು ಹೊತ್ತೊಯ್ದ ಉಗ್ರರು ಮತ್ತೊಬ್ಬ ವ್ಯಕ್ತಿಯನ್ನು ರಸ್ತೆಯ ಮಧ್ಯೆಯೇ ತಳ್ಳಿದ್ದಾರೆ. ನಂತರ ಮತ್ತೊಬ್ಬ ವ್ಯಕ್ತಿಯ ಕತ್ತನ್ನು ಸೀಳಿ ಪಂಜಾಬ್-ಹಿಮಾಚಲ ಪ್ರದೇಶದ ದಮ್ತಲ್ ಬೆಟ್ಟದ ಬಳಿ ತಳ್ಳಿದ್ದಾರೆಂಬ ವಿಷಯ ಸೇನೆಗೆ ತಿಳಿದುಬಂದಿತ್ತು. ಕತ್ತು ಸೀಳಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಇದೀಗ ಅಪಹರಣಕ್ಕೂ ಉಗ್ರರ ದಾಳಿಗೆ ನಂಟಿರುವ ಕುರಿತಂತೆ ಹಲವು ಅನುಮಾನಗಳು ವ್ಯಕ್ತವಾಗುತ್ತಿದ್ದು, ಅಪಹರಕ್ಕೊಳಗಾದ ಎಸ್ ಪಿ ಸಲ್ವಿಂದರ್ ಸಿಂಗ್ ಅವರನ್ನು ಗುಪ್ತಚರ ಇಲಾಖೆ ವಿಚಾರಣೆ ನಡೆಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com