ನವದೆಹಲಿ: ರೈಲ್ವೇ ನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ ಎಂಬ ಹುಸಿ ಬಾಂಬ್ ಬೆದರಿಕೆಯಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾನುವಾರ ರೈಲು ಸಂಚಾರ ವಿಳಂಬವಾಯಿತು.
ದೆಹಲಿ ಪೊಲೀಸರಿಗೆ ದೆಹಲಿ-ಕಾನ್ಪುರ ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಇ-ಮೇಲ್ ಬಂದ ಹಿನ್ನಲೆಯಲ್ಲಿ ಕೆಲಕಾಲ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಪ್ರಮುಖವಾಗಿ ದೆಹಲಿ-ಕಾನ್ಪುರ ರೈಲನ್ನು ತೀವ್ರ ತಪಾಸಣೆ ಮಾಡಿದರು. ಆದರೆ ಪರಿಶೀಲನೆ ವೇಳೆ ಯಾವುದೇ ಸ್ಫೋಟಕಗಳು ಕಂಡು ಬಂದಿಲ್ಲ. ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದ ಪೊಲೀಸರು ಭಾನುವಾರ ಬೆಳಗ್ಗೆ ಸುಮಾರು 7.30 ರ ಬಳಿಕ ರೈಲುಗಳ ಸಂಚಾರಕ್ಕೆ ಮಾಡಿಕೊಟ್ಟರು.
ನಿನ್ನೆಯಷ್ಟೆ ಪಠಾಣ್ಕೋಟ್ ನ ಸೇನಾ ವಾಯುನೆಲೆಯ ಮೇಲೆ ಉಗ್ರದಾಳಿ ನಡೆದಿರುವ ಹಿನ್ನಲೆಯಲ್ಲಿ ದೆಹಲಿಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಎಲ್ಲಾ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ವ್ಯಾಪಕವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ ಸಂಸತ್ ಭವನ, ಸರ್ಕಾರಿ ಕಚೇರಿಗಳು ಸೇರಿದಂತೆ ದೆಹಲಿಯ ಪ್ರಮುಖ ಪ್ರದೇಶಗಳಲ್ಲಿ ವ್ಯಾಪಕ ಭದ್ರತೆ ಒದಗಿಸಲಾಗಿದೆ.
Advertisement