

ಮಧುರೈ: ದಕ್ಷಿಣ ಭಾರತದ ಖ್ಯಾತ ದೇವಾಲಯಗಳಲ್ಲಿ ಒಂದಾಗಿರುವ ಮಧುರೈ ಮೀನಾಕ್ಷಿ ದೇವಾಲಯದ ಬಳಿ ಪೆಟ್ರೋಲ್ ಬಾಂಬ್'ವೊಂದು ಸ್ಪೋಟಗೊಂಡಿರುವುದಾಗಿ ತಿಳಿದುಬಂದಿದೆ.
ಕಳೆದ ರಾತ್ರಿ ದುಷ್ಕರ್ಮಿಗಳು ದೇವಾಲಯದ ಬಳಿ ಮೂರು ಪೆಟ್ರೋಲ್ ಬಾಂಬ್ ಗಳನ್ನು ಎಸೆದು ಪರಾರಿಯಾಗಿದ್ದು, ಮೂರು ಬಾಂಬ್ ಗಳಲ್ಲಿ ಒಂದು ಪೆಟ್ರೋಲ್ ಬಾಂಬ್ ಸ್ಪೋಟಗೊಂಡಿದೆ ಎಂದು ಹೇಳಲಾಗುತ್ತಿದೆ.
ಬಾಂಬ್ ಸ್ಫೋಟಗೊಂಡ ನಂತರ ದೇವಾಲಯದ ಸುತ್ತುಮತ್ತ ಆತಂಕದ ವಾತಾವರಣ ಸೃಷ್ಟಿಯಾಗಿದೆ. ತದನಂತರ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಸ್ಪೋಟಕ್ಕೆ ಪೆಟ್ರೋಲ್ ಬಾಂಬ್ ಕಾರಣವಾಗಿದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಸ್ಥಳದಲ್ಲಿ ಇನ್ನು ಎರಡು ಪೆಟ್ರೋಲ್ ಬಾಂಬ್ ಗಳು ದೊರಕಿದ್ದು, ಅಧಿಕಾರಿಗಳು ಇದೀಗ ಸ್ಥಳದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ, ದೇವಾಲಯದ ಸುತ್ತಮುತ್ತ ಹೆಚ್ಚಿನ ಭದ್ರತೆಯನ್ನು ನಿಯೋಜಿಸಿದ್ದಾರೆ.
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು, ಅಪರಿಚಿತ ವ್ಯಕ್ತಿಗಳು ಕಳೆದ ರಾತ್ರಿ 2ಗಂಟೆ ಸುಮಾರಿಗೆ ದೇವಾಲಯದ ಬಳಿ ಮೂರು ಪೆಟ್ರೋಲ್ ಬಾಂಬ್ ಗಳನ್ನು ಎಸೆದು ಪರಾರಿಯಾಗಿದ್ದಾರೆ. ಇದರಲ್ಲಿ ಒಂದು ಬಾಂಬ್ ಮಾತ್ರ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂದು ಹೇಳಿದ್ದಾರೆ.
Advertisement