ಗುರುದಾಸ್ಪುರ ಎಸ್ ಪಿಯತ್ತ ಎನ್‍ಐಎನ ಉಗ್ರ ಕೆಂಗಣ್ಣು

ಬುಧವಾರ ಸಂಜೆ ಉಗ್ರರ ವಿರುದ್ಧದ ಕೂಂಬಿಂಗ್ ಸ್ಥಗಿತಗೊಳಿಸುವ ಮೂಲಕ ಪಂಜಾಬ್‍ನ ಪಠಾಣ್ ಕೋಟ್‍ನ ಭಾರತೀಯ ವಾಯು ನೆಲೆಯಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ಉಗ್ರರ ವಿರುದ್ಧದ 85 ಗಂಟೆಗಳ ನಿರಂತರ ಕಾರ್ಯಾಚರಣೆಗೆ ಅಂತಿಮ ತೆರೆಬಿದ್ದಿದೆ...
ಗುರುದಾಸ್ಪುರ ಎಸ್ ಪಿಯತ್ತ ಎನ್‍ಐಎನ ಉಗ್ರ ಕೆಂಗಣ್ಣು
ಗುರುದಾಸ್ಪುರ ಎಸ್ ಪಿಯತ್ತ ಎನ್‍ಐಎನ ಉಗ್ರ ಕೆಂಗಣ್ಣು
Updated on

ನವದೆಹಲಿ/ಪಠಾಣ್‍ಕೋಟ್: ಬುಧವಾರ ಸಂಜೆ ಉಗ್ರರ ವಿರುದ್ಧದ ಕೂಂಬಿಂಗ್ ಸ್ಥಗಿತಗೊಳಿಸುವ ಮೂಲಕ ಪಂಜಾಬ್‍ನ ಪಠಾಣ್ ಕೋಟ್‍ನ ಭಾರತೀಯ ವಾಯು ನೆಲೆಯಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ಉಗ್ರರ ವಿರುದ್ಧದ 85 ಗಂಟೆಗಳ ನಿರಂತರ ಕಾರ್ಯಾಚರಣೆಗೆ ಅಂತಿಮ ತೆರೆಬಿದ್ದಿದೆ.

ಈ ನಡುವೆ, ಆರು ಮಂದಿ ಉಗ್ರರು ದೇಶದ ಗಡಿ ದಾಟಿ ಅತ್ಯಂತ ಬಿಗಿ ಭದ್ರತೆಯ ವಾಯು ನೆಲೆಯೊಳಗೆ ನುಸುಳಿದ್ದು ಹೇಗೆ ಮತ್ತು ಗುರುದಾಸ್ಪುರ ಎಸ್ಪಿಯ ವಾಹನವನ್ನೇ ಬಳಸಿ ಆರು
ತಾಸಿಗೂ ಅಧಿಕ ಸಮಯ ನಿರಾತಂಕವಾಗಿ ಸುತ್ತಾಡಿ ದ್ದು ಹೇಗೆ ಎಂಬ ಪ್ರಶ್ನೆಗಳು ಗಂಭೀರ ಸ್ವರೂಪ ಪಡೆದಿವೆ. ಒಂದೆಡೆ ಇದೇ ಪ್ರಶ್ನೆಗಳನ್ನಿಟ್ಟುಕೊಂಡು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ಪ್ರಕರಣ ತನ್ನ ತನಿಖೆಯನ್ನು ಗುರುದಾಸ್ಪುರ ಎಸ್ಪಿಯ ಹೇಳಿಕೆಯತ್ತ ಕೇಂದ್ರೀಕರಿಸಿದೆ.

ಶನಿವಾರ ರಾತ್ರಿ ಆಗಂತುಕರು ತಮ್ಮ ಕಾರಿನೊಂದಿಗೆ ತಮ್ಮನ್ನು ಒತ್ತೆಯಿಟ್ಟುಕೊಂಡಿದ್ದರು. ಕೆಲ ಸಮಯದ ಬಳಿಕ ತಮ್ಮನ್ನು ಬಿಟ್ಟು ಕಾರು ತೆಗೆದುಕೊಂಡು ಹೋದರು ಎಂಬ ಗುರುದಾಸ್ಪುರ ಎಸ್ಪಿ ಸಲ್ವಿಂದರ್ ಸಿಂಗ್ ಅವರ ಹೇಳಿಕೆಯನ್ನು ಅನುಮಾನಿಸಿರುವ ಎನ್‍ಐಎ ಬುಧವಾರ ತನ್ನ ತನಿಖೆಯನ್ನು ಅವರ ಸುತ್ತಲೇ ಕೇಂದ್ರೀಕರಿಸಿದೆ ಅಲ್ಲದೆ, ಅವರ ಹೇಳಿಕೆ ಮತ್ತು ವಾಸ್ತವಾಂಶಗಳ ನಡುವೆ ತಾಳೆಯಾಗದಿರುವುದನ್ನು ಶಂಕಿಸಿರುವ ದೇಶದ ಅತ್ಯುನ್ನತ ಗಂಭೀರ ಅಪರಾಧ ತನಿಖಾ ಸಂಸ್ಥೆ, ಉಗ್ರರಿಗೂ ಎಸ್ಪಿಗೂ ನಂಟಿರಬಹುದೇ ಎಂದು
ಅನುಮಾನಿಸಿದೆ.

ಪಂಜ್ ಪೀರ್ ಪ್ರಾರ್ಥನಾ ಕೇಂದ್ರದ ತಮ್ಮ ಭೇಟಿಯ ಬಗ್ಗೆ ಸಲ್ವಿಂದರ್ ಸಿಂಗ್ ನೀಡಿದ್ದ ಹೇಳಿಕೆ ಮತ್ತು ಅಲ್ಲಿನ ಪಾಲಕ ನೀಡಿದ ಅಭಿಪ್ರಾಯಗಳು ಗೊಂದಲ ಮತ್ತು ಅನುಮಾನಗಳಿಗೆ ಪುಷ್ಟಿ ನೀಡಿವೆ. ಅಲ್ಲದೆ, ಇದೇ ದರ್ಗಾದ ಸಮೀಪವೇ ಉಗ್ರರು ಧರಿಸಿದ್ದ ಪಾಕಿಸ್ತಾನದ ಎಪ್‍ಕಾಟ್ ಬ್ರಾಂಡಿನ ಶೂ ಗುರುತುಗಳನ್ನು ಎನ್‍ಐಎ ಪತ್ತೆಮಾಡಿದೆ.
ದರ್ಗಾದಿಂದ ವಾಪಸ್ಸಾಗುವಾಗ ಮಾರ್ಗಮಧ್ಯೆ ತಮ್ಮನ್ನು ಶಸ್ತ್ರ ಸಜ್ಜಿತ ಉಗ್ರರು ಹೈಜಾಕ್ ಮಾಡಿದ್ದರು ಎಂದು ಎಸ್ಪಿ ಹೇಳಿಕೆ ನೀಡಿದ್ದರು.

ಗುರುದಾಸ್ಪುರದಲ್ಲಿ ಮತ್ತೆ ಆತಂಕ: ಈ ನಡುವೆ, ಇಬ್ಬರು ಸೇನಾ ಸಮವಸ್ತ್ರಧಾರಿಗಳು ಅನುಮಾನಾಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದರು ಎಂದು ತಿಬ್ರಿ ಹಳ್ಳಿಯ ಜನತೆ ಆತಂಕಗೊಂಡಿದ್ದರು. ಆ ಹಿನ್ನೆಲೆಯಲ್ಲಿ ಬುಧವಾರ ಗುರುದಾಸ್ಪುರ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಅಲ್ಲದೆ ಹಳ್ಳಿಯಲ್ಲಿ ಪೊಲೀಸ್ ಹಾಗೂ ಸೇನೆಯಿಂದ ವ್ಯಾಪಕ ಶೋಧ ಕಾರ್ಯಾಚರಣೆ ಕೂಡ ನಡೆಯಿತು.

ಇದರ ಜತೆ ಪಠಾಣ್‍ಕೋಟ್ ವಾಯುನೆಲೆ ಸಮೀಪ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಸೇನೆ, ಪೊಲೀಸರು ವಶಕ್ಕೆ ಪಡೆದುಕೊಂಡಿವೆ. ನಿಲ್ಲದ ಕಾಂಗ್ರೆಸ್, ಸೇನೆ ವಾಗ್ದಾಳಿ : ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಶಿವಸೇನೆ ವಾಗ್ದಾಳಿ ಮುಂದುವರಿಸಿದೆ. 2014ರ ಚುನಾವಣೆ ಬಳಿಕ ದೇಶದಲ್ಲಿ ಯಾವ ಭಾರಿ ಬದಲಾವಣೆ ಕಂಡಿದೆ ಎಂದು ಪಕ್ಷದ ಮುಖವಾಣಿ `ಸಾಮಾ್ನ'ದಲ್ಲಿ ಪ್ರಶ್ನಿಸಿದೆ.

``ರಾಮ ಮಂದಿರ ವಿವಾದದಿಂದ ಸಮಾನ ನಾಗರಿಕ ಸಂಹಿತೆ, ಹಣದುಬ್ಬರ, ಭ್ರಷ್ಟಾಚಾರ, ಹಿಂದುತ್ವ, ಪಾಕಿಸ್ತಾನ ವಿರುದ್ಧದ ನೀತಿಯಲ್ಲಿ ಯಾವ ರೀತಿಯ ಬದಲಾವಣೆಯಾಗಿದೆ. ಈ ಬಗ್ಗೆ ಜನರು ತಿಳಿಯಬಯಸುತ್ತಿದ್ದಾರೆ. ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ತಪ್ಪುಗಳೇ ಮುಂದುವರಿಕೆಯಾಗಿವೆ'' ಎಂದು ಟೀಕಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com