ನವದೆಹಲಿ: ಭಾರತ ಮತ್ತು ವಿಶ್ವಾದ್ಯಂತ ಮಕ್ಕಳ ಹಕ್ಕು ಮತ್ತು ರಕ್ಷಣೆಗಾಗಿ ಹೋರಾಡುತ್ತಿರುವ 2014ರ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೈಲಾಶ್ ಸತ್ಯರ್ಥಿ, ತಮ್ಮ ಜೀವಿತಾವಧಿಯಲ್ಲಿ ಮಕ್ಕಳ ಗುಲಾಮಗಿರಿ ಪದ್ಧತಿಯನ್ನು ಹೋಗಲಾಡಿಸುವುದು ತಮ್ಮ ಅಭಿಯಾನದ ಗುರಿ ಎಂದು ಹೇಳಿದ್ದಾರೆ.
ನಾವು ಮಕ್ಕಳ ಸ್ವಾತಂತ್ರ್ಯದ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ನನ್ನ ಜೀವಿತಾವಧಿಯಲ್ಲಿ ಮಕ್ಕಳ ಗುಲಾಮಗಿರಿಯನ್ನು ಹೋಗಲಾಡಿಸುವುದು ನನ್ನ ಗುರಿಯಾಗಿದೆ. 35 ವರ್ಷ ಮಾನವ ಜನಾಂಗದ ಇತಿಹಾಸದಲ್ಲಿ ದೀರ್ಘ ವರ್ಷವೇನಲ್ಲ. 35 ವರ್ಷಗಳ ಹಿಂದೆ ನಮ್ಮ ದೇಶ ಸೇರಿದಂತೆ ವಿಶ್ವಾದ್ಯಂತ ಮಕ್ಕಳ ಗುಲಾಮಗಿರಿ ಸಮಸ್ಯೆಯೇ ಆಗಿರಲಿಲ್ಲ ಎನ್ನುತ್ತಾರೆ.
ಮಕ್ಕಳ ಗುಲಾಮ ಪದ್ಧತಿ ನಾಶವಾಗಿದೆ ಎಂದು ಜನರು ಭಾವಿಸುತ್ತಾರೆ. ಅವರನ್ನು ಗುಲಾಮರನ್ನಾಗಿ ಕಾಣುವುದರಲ್ಲಿ ಯಾವುದೇ ಸಮಸ್ಯೆಯಿದೆ ಎಂದು ಹಲವರಿಗೆ ಕಾಣುವುದಿಲ್ಲ. ಆದರೆ ಸಮಸ್ಯೆ ಇನ್ನೂ ಕೂಡ ಜೀವಂತವಾಗಿದ್ದು, ನಾವದಕ್ಕೆ ಒಂದು ಪರಿಹಾರ ಕಂಡುಕೊಳ್ಳಬೇಕು.
ಅವರು ಹಿಂದಿ ಭಾಷೆಯಲ್ಲಿ ಬರೆದ 'ಆಜಾದ್ ಬಚ್ ಪನ್ ಕಿ ಔರ್' ಕೃತಿಯನ್ನು ನಿನ್ನೆ ದೆಹಲಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ದೀಪಕ್ ಮಿಶ್ರಾ ಬಿಡುಗಡೆ ಮಾಡಿದ್ದರು. ಕೃತಿಯಲ್ಲಿ ತಮ್ಮ ಮೂರು ದಶಕಗಳ ಮಕ್ಕಳ ಹಕ್ಕು ಕುರಿತ ಹೋರಾಟ ಸಂದರ್ಭಗಳಲ್ಲಿ ನಮ್ಮ ದೇಶದ ಪ್ರಮುಖ ಚಳವಳಿಗಳು, ತೀರ್ಪು, ಘಟನೆಗಳು ಮತ್ತು ಪ್ರಮುಖ ಯೋಜನೆಗಳನ್ನು ನಮೂದಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕೈಲಾಶ್ ಸತ್ಯರ್ಥಿ, ಇದು ನನ್ನ ಮೊದಲ ಪುಸ್ತಕ, ಇದು ನನ್ನ ಮಾತೃಭಾಷೆಯಲ್ಲಿ ಪ್ರಕಟಗೊಂಡಿದೆ. ಈ ಪುಸ್ತಕದಲ್ಲಿರುವ ಲೇಖನಗಳನ್ನು ನನ್ನ ಜೀವನದ ಹೆಚ್ಚು ಭಾವನಾತ್ಮಕ ಮತ್ತು ದೈಹಿಕವಾಗಿ ಕ್ಷೀಣ ಸಂದರ್ಭಗಳಲ್ಲಿ ಬರೆದಿದ್ದೇನೆ ಎಂದು ತಿಳಿಸಿದರು.
ಮಕ್ಕಳ ಕಳ್ಳಸಾಗಣೆ, ಮಕ್ಕಳು ಕಳೆದುಹೋಗುವುದು, ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ನಿಂದನೆ ಮೊದಲಾದ ಅಂಶಗಳು ನ್ಯಾಯಾಂಗ ವಿವೇಚನೆಯ ವಿಷಯಗಳನ್ನು ಒಳಗೊಂಡಿದೆ. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಕೆಲಸ ಮಾಡುವ ಅಂಶಗಳನ್ನು ಪುಸ್ತಕ ಒಳಗೊಂಡಿದೆ ಎಂದು ನ್ಯಾಯಾಧೀಶ ದೀಪಕ್ ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement