ಪಣಜಿ: ಮಹದಾಯಿ ಯೋಜನೆ ಕುರಿತಂತೆ ಗೋವಾ ರಾಜ್ಯದ ಹಿತ ಕಾಪಾಡುತ್ತಲೇ ಬಂದಿದ್ದೇನೆ. ಹುಬ್ಬಳ್ಳಿಯಲ್ಲಿ ನಾನು ನೀಡಿದ ಹೇಳಿಕೆಯನ್ನು ಗೋವಾದಲ್ಲಿ ಸರಿಯಾಗಿ ಅರ್ಥೈಸಿಕೊಳ್ಳಲಾಗಿಲ್ಲ. ಸರಿಯಾಗಿ ತಿಳಿದುಕೊಂಡಿದ್ದಲ್ಲಿ ನನ್ನ ವಿರುದ್ಧ ಯಾರೂ ಟೀಕೆ ಮಾಡುತ್ತಿರಲಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ ಪರ್ರಿಕರ್ ಹೇಳಿದ್ದಾರೆ.
ಶನಿವಾರ ಪಣಜಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ವಿವಾದವನ್ನು ನ್ಯಾಯಾಲಯ, ನ್ಯಾಯಾಧಿಕರಣದ ಮುಂದೆ ತೆಗೆದುಕೊಂಡು ಹೋಗುವಲ್ಲಿಯೂ ನನ್ನ ಪಾತ್ರ ಪ್ರಮುಖವಾಗಿದೆ. ನ್ಯಾಯಾಧಿಕರಣದ ಹೊರಗೆ ಸಮಸ್ಯೆ ಬಗೆಹರಿಸಲು ನಾನು ಯಾವತ್ತೂ ಮುಂದಾಗಿಲ್ಲ. ಕರ್ನಾಟಕದ ಮುಖ್ಯಮಂತ್ರಿ ನನ್ನ ಬಳಿ ಈ ಕುರಿತು ಮನವಿ ಮಾಡಿಕೊಂಡರೆ ಮಾತ್ರ ಪರಿಶೀಲಿಸುತ್ತೇನೆಂದು ಹೇಳಿದ್ದೆ ಅಷ್ಟೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿನ ಕಾರ್ಯಕ್ರಮವೊಂದರಲ್ಲಿ ನಾನು ಪಾಲ್ಗೊಂಡಿದ್ದ ಸಂದರ್ಭದಲ್ಲಿ ಮಹದಾಯಿ ನದಿ ನೀರಿನ ಸಮಸ್ಯೆ, ಕರ್ನಾಟಕದ ಹೋರಾಟದ ಕುರಿತು ಕೆಲವರು ನನ್ನ ಬಳಿ ಪ್ರಶ್ನಿಸಿದರು. ನಾನು ಈಗ ಗೋವಾ ಮುಖ್ಯಮಂತ್ರಿ ಅಲ್ಲ. ಒಂದು ವೇಳೆ ಕರ್ನಾಟಕದ ಮುಖ್ಯಮಂತ್ರಿ ಈ ಕುರಿತು ಚರ್ಚಿಸಲು ಅಥವಾ ಮನವಿ ಮಾಡಿಕೊಳ್ಳಬೇಕಾದರೆ ಗೋವಾ ಮುಖ್ಯಮಂತ್ರಿ ಬಳಿಯೇ ಪ್ರಶ್ನಿಸಬೇಕಾಗುತ್ತದೆ. ಮುಖ್ಯಮಂತ್ರಿಗಳು ನನ್ನ ಬಳಿ ಮನವಿ ಮಾಡಿಕೊಂಡರೆ ನಾನು ಚರ್ಚೆಗೆ ಬರುತ್ತೇನೆ ಎಂದಷ್ಟೆ ಹೇಳಿದ್ದೆ ಎಂದರು.
Advertisement