ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣ: ವರದಿ ಪಡೆದ ದೆಹಲಿ ಪೊಲೀಸರು
ನವದೆಹಲಿ: ದೇಶದಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಏಮ್ಸ್ ವೈದ್ಯರಿಂದ ದೆಹಲಿ ಪೊಲೀಸರು ಅಂತಿಮ ವರದಿಯನ್ನು ಪಡೆದಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ.
ವರದಿ ಪಡೆದಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ದೆಹಲಿ ಪೊಲೀಸ್ ವರಿಷ್ಠಾಧಿಕಾರಿ ಬಸ್ಸಿ ಅವರು, ಸುನಂದಾ ಪುಷ್ಕರ್ ನಿಗೂಢ ಸಾವು ಕುರಿತಂತೆ ಏಮ್ಸ್ ವೈದ್ಯರು ಅಂತಿಮ ವರದಿಯೊಂದನ್ನು ಸಲ್ಲಿಸಿದ್ದು, ವರದಿಯಲ್ಲಿನ ನಿಖರ ಮಾಹಿತಿಗಳನ್ನು ವಿಶೇಷ ಪೊಲೀಸ್ ಆಯುಕ್ತರಾದ ದೀಪಕ್ ಮಿಶ್ರಾ ಅವರು ಬಹಿರಂಗ ಪಡಿಸಲಿದ್ದಾರೆಂದು ಹೇಳಿದ್ದಾರೆ.
ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರು ದೆಹಲಿಯ ಚಾಣಕ್ಯಪುರಿಯ ಲೀಲಾ ಪ್ಯಾಲೆಸ್ ಪಂಚತಾರಾ ಹೋಟೆಲ್ನ ರೂಮ್ ನಂ.345ರಲ್ಲಿ ಜನವರಿ 17ರ ರಾತ್ರಿ ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಸಾವು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು.
2014ರ ಜನವರಿ 17 ರಂದು ದೆಹಲಿಯ ಪಂಚತಾರಾ ಹೋಟೆಲ್ ನಲ್ಲಿ ಸುನಂದಾ ಪುಷ್ಕರ್ ಅವರ ಮೃತ ದೇಹ ಪತ್ತೆಯಾಗಿತ್ತು. ಈ ಸಾವು ಸಾಕಷ್ಟು ಅನುಮಾನಕ್ಕೆ ದಾರಿ ಮಾಡಿಕೊಟ್ಟಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ