ಬಾಂಬ್ ಶಂಕೆ: ಶತಾಬ್ದಿ ರೈಲು ತಪಾಸಣೆ
ಕಲಬುರಗಿ: ಬಾಂಬ್ ಭೀತಿಯಿಂದಾಗಿ ಕಲಬುರಗಿ ನಿಲ್ದಾಣದಲ್ಲಿ ಸಿಕಂದರಾಬಾದ್ ಮುಂಬೈ ಶತಾಬ್ದಿ ಎಕ್ಸ್ ಪ್ರೆಸ್ನಲ್ಲಿ ಪೊಲೀಸರು ಒಂದು ಗಂಟೆ ಕಾಲ ರೈಲಿನ ತಪಾಸಣೆ ನಡೆಸಿದ ಪ್ರಸಂಗ ಶುಕ್ರವಾರ ರಾತ್ರಿ ನಡೆಯಿತು.
ಈ ವೇಳೆ ರೈಲಿನಲ್ಲಿ ಶಂಕಾಸ್ಪದವಾಗಿ ತಿರುಗಾಡುತ್ತಿದ್ದ ಇಫ್ತಿ ಕಾರ್ (36) ಎಂಬಾತನನ್ನು ರೇಲ್ವೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದರು. ಸಿಕಂದರಾಬಾದ್ನಿಂದ ಹೊರಟ ರೈಲು ರಾತ್ರಿ ವಾಡಿ ತಲುಪಿದಾಗ ರೈಲಿನಲ್ಲಿ ಅತ್ತಿತ್ತ ಓಡಾಡುತ್ತಿದ್ದ ಇಫ್ತಿ ಕಾರನ್ನು ಕಂಡ ಪ್ರಯಾಣಿಕರು, ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ಅನುಮಾನಾಸ್ಪದವಾಗಿ ಓಡಾಡುತ್ತಿರುವ ವ್ಯಕ್ತಿಯ ಬ್ಯಾಗ್ನಲ್ಲಿ ಬಾಂಬ್ ಇರಬಹುದು ಎಂದು ಶಂಕಿಸಿದ್ದಾರೆ.
ತಕ್ಷಣ ನಿಲ್ದಾಣಕ್ಕೆ ಬಂದ ವಾಡಿ ರೇಲ್ವೆ ಪೊಲೀಸರು, ಇಫ್ತಿಕಾರನ್ನು ಬಂಧಿಸಿದ್ದಾರೆ. ಮನೆಯವರಿಗೆ ಕರೆ ಮಾಡಿ ವಿಚಾರಿಸಿದಾಗ ಆತ ಮಾನಸಿಕವಾಗಿ ನೊಂದಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.
ಬಳಿಕ ಪ್ರಯಾಣಿಕರ ಭಯ ಹೋಗಲಾಡಿಸಲು ಕಲಬುರಗಿಯಲ್ಲಿ ಬಾಂಬ್ ಪತ್ತೆ ದಳ, ಶ್ವಾನ ದಳದೊಂದಿಗೆ ರೈಲನ್ನು ಜಾಲಾಡಿದ್ದು, ಯಾವುದೇ ಸ್ಫೋಟಕ ದೊರೆತಿಲ್ಲ. ಆದಾಗ್ಯೂ ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ರಾಯಚೂರಿಗೆ ಕರೆದೊಯ್ಯಲಾಗಿದೆ. ನಿವೃತ್ತ ಯೋಧರೊಬ್ಬರು ಕರೆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ್ದಾಗಿ ಐಜಿಪಿ ವಿಶ್ವನಾಥ್ ಮಾಹಿತಿ ನೀಡಿದ್ದಾರೆ.