ಬೆಂಗಳೂರು: ಬಿಹಾರದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಲೋಕ ಜನ ಶಕ್ತಿ ಪಕ್ಷ (ಎಲ್ ಜೆ ಪಿ) ಬಿಹಾರ ಸರ್ಕಾರದ ಮೇಲೆ ಮುಖ್ಯಂಮತ್ರಿ ನಿತೀಶ್ ಕುಮಾರ್ ಸಂಪೂರ್ಣ ಹಿಡಿತ ಕಳೆದುಕೊಂಡಿದ್ದಾರೆ ಎಂದಿದೆ.
ಲಾಲು ಪ್ರಸಾದ್ ಯಾದವ್ ಅವರೊಂದಿಗೆ ನಿತೀಶ್ ಕುಮಾರ್ ಮೈತ್ರಿ ಮಾಡಿಕೊಂಡಾಗಲೇ ಬಿಹಾರದಲ್ಲಿ ಮತ್ತೊಮ್ಮೆ ಜಂಗಲ್ ರಾಜ್ ಎದುರಾಗುವ ಆತಂಕ ವ್ಯಕ್ತವಾಗಿತ್ತು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊಲೆ ಪ್ರಕರಣಗಳನ್ನು ನೋಡಿದರೆ ಆತಂಕ ನಿಜವಾಗಿದೆ ಎನಿಸುತ್ತಿದೆ ಎಂದು ಎಲ್ ಜೆ ಪಿ ಮುಖಂಡ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ನಡೆದ ಪಕ್ಷದ ಸಭೆಯಲ್ಲಿ ಬಿಹಾರದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಬೇಕೆಂಬ ವಿಚಾರವನ್ನು ಚರ್ಚಿಸಲಾಯಿತಾದರೂ, ಇತ್ತೀಚೆಗಷ್ಟೇ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಆ ರೀತಿ ಒತ್ತಾಯಿಸುವುದು ಸೂಕ್ತ ಅಲ್ಲ ಎಂಬ ನಿರ್ಧಾರಕ್ಕೆ ಬರಲಾಯಿತು ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಅಪರಾಧ ಪ್ರಕರಣಗಳನ್ನು ತಡೆಗಟ್ಟದಂತೆ ನಿತೀಶ್ ಕುಮಾರ್ ಅವರನ್ನು ತಡೆಯುತ್ತಿರುವುದಾದರೂ ಏನು ಎಂಬುದು ತಿಳಿಯುತ್ತಿಲ್ಲ. ಅಪರಾಧಗಳನ್ನು ತಡೆಯಲು ನಿತೀಶ್ ಕುಮಾರ್ ವಿಫಲವಾಗಿರುವುದು, ಅವರು ಸರ್ಕಾರದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಈ ಪರಿಸ್ಥಿತಿ ಮುಂದುವರೆದರೆ ಬಿಹಾರದಲ್ಲಿ ಜೆಡಿಯು- ಆರ್ ಜೆಡಿ ಮೈತ್ರಿ ಸರ್ಕಾರ 2 ವರ್ಷಕ್ಕಿಂತ ಹೆಚ್ಚು ಸಮಯ ಉಳಿಯುವುದಿಲ್ಲ ಎಂದು ಚಿರಾಗ್ ಪಾಸ್ವಾನ್ ಅಭಿಪ್ರಾಯಪಟ್ಟಿದ್ದಾರೆ.
Advertisement