ಹುಲಿ ಸಂರಕ್ಷಣೆಗಿಂತ ಅಭಿವೃದ್ಧಿಯೇ ಮುಖ್ಯ: ಸುಪ್ರೀಂ ಕೋರ್ಟ್
ನವದೆಹಲಿ: ಹುಲಿ ಸಂರಕ್ಷಣೆಗೆ ಆದ್ಯತೆ ನೀಡಬೇಕಾಗುತ್ತದೆ, ಆದರೂ ಅಭಿವೃದ್ಧಿ ವಿಷಯ ಎದುರಾದಾಗ ಹುಲಿ ಸಂರಕ್ಷಣೆಗಿಂತಲೂ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಸಂರಕ್ಷಿತ ಅರಣ್ಯ ಪ್ರದೇಶದ ನಡುವೆ ಹಾದುಹೋಗುವ ನಾಗ್ಪುರ- ಜಬಲ್ ಪುರ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣವನ್ನು ವಿರೋಧಿಸಿ ಎನ್ ಜಿ ಒ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಟಿ.ಎಸ್ ಠಾಕೂರ್, ಎ.ಕೆ ಸಿಕ್ರಿ, ಅರ ಭಾನುಮತಿ ಅವರ ಪೀಠ, ಅಭಿವೃದ್ಧಿ ವಿಷಯ ಎದುರಾದಾಗ ಮಾತ್ರ ಹುಲಿ ಸಂರಕ್ಷಣೆ ಕುರಿತು ಧ್ವನಿ ಎತ್ತುವ ಎನ್ ಜಿ ಒ ನಡೆಯನ್ನು ತರಾಟೆಗೆ ತೆಗೆದುಕೊಂಡಿದೆ.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕುರಿತು ಎನ್ ಜಿಒ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ( ಎನ್ ಜಿ ಟಿ) ಭಿನ್ನ ತೀರ್ಪು ನೀಡಿದ್ದರಿಂದಾಗಿ, ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ವೇಳೆ ಹುಲಿ ಸಂರಕ್ಷಣೆ, ಅಭಿವೃದ್ಧಿ ವಿಷಯಗಳಲ್ಲಿ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ ಎಂದಿರುವ ಸುಪ್ರೀಂ ಕೋರ್ಟ್ ಹುಲಿ ವಲಸೆ ಮಾರ್ಗಗಳಳಿಗೆ ಹಾನಿಯಾಗದಂತೆ ಹೆದ್ದಾರಿ ಅಗಲೀಕರಣ ಮಾಡುವ ಉಪಾಯ ಹೇಳಿ ಅಂತ ಅರ್ಜಿದಾರರನ್ನೇ ಕೇಳಿದೆ.
" ಅಭಿವೃದ್ಧಿಯನ್ನು ಬದಿಗಿಟ್ಟು ಹುಲಿ ಸಂರಕ್ಷಣೆಯನ್ನು ಮಾತ್ರ ಮಾಡುವುದಕ್ಕೆ ಸಾಧ್ಯವಿಲ್ಲ, ಅರಣ್ಯ ಪ್ರದೇಶಗಳಲ್ಲಿ ಹುಲಿ ಬೇಟೆ ನಡೆಯುತ್ತಿರುವುದರ ಅವ್ಯಾಹತ ಹುಲಿ ಬೇಟೆ ನಡೆಯುತ್ತಿದ್ದರೂ ಆ ಕುರಿತು ಯಾವುದೇ ಪಿಐಎಲ್ ದಾಖಲಿಸದೇ ಪ್ರತಿ ಬಾರಿ ಅಭಿವೃದ್ಧಿ ವಿಷಯಗಳು ಎದುರಾದಾಗ ಮಾತ್ರ ಕೋರ್ಟ್ ಮೆಟ್ಟಿಲೇರುತ್ತೀರಾಲ್ಲಾ ಏಕೆ" ಎಂದು ಅರ್ಜಿದಾರರನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಅಲ್ಲದೇ ಹುಲಿಗಳ ಬೇಟೆ ತಡೆಯುವುದಕ್ಕೆ ಸಂಬಂಧಿಸಿದಂತೆ ಯಾವುದಾದರೂ ಪಿಐಎಲ್ ಸಲ್ಲಿಸಿ ಎಂದೂ ಸಲಹೆ ನೀಡಿದೆ. ಇದೇ ವೇಳೆ ಹುಲಿಗಳಿಗೆ ರಸ್ತೆ ಅಗಲೀಕರಣಕ್ಕಿಂತ ಬೇಟೆಯಾಡುವವರಿಂದಲೇ ಹೆಚ್ಚು ಆಪತ್ತು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.