ಬೆಂಗಳೂರು: ತುಮಕೂರಿನಲ್ಲಿ ಎನ್ಐಎ- ಎಟಿಎಸ್ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಬಂಧನಕ್ಕೊಳಗಾದ ಶಂಕಿತ ಉಗ್ರ ಸೈಯದ್ ಮುಜಾಹಿದ್ ಹುಸೇನ್ ಅಸಾವುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಪಕ್ಷದ ತುಮಕೂರು ಜಿಲ್ಲಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂಬುದು ಮಾಧ್ಯಮದ ವರದಿಯೊಂದರ ಮೂಲಕ ತಿಳಿದುಬಂದಿದೆ.
ಈ ಅಂಶ ವರದಿಯಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ತುಮಕೂರು ನಗರ ಶಾಸಕ ರಫೀಕ್ ಅಹ್ಮದ್, ಯುವಕರು ಉಗ್ರ ಚಟುವಟಿಕೆಯಲ್ಲಿ ತೊಡಗದಂತೆ ಮನವಿ ಮಾಡಿದ್ದಾರೆ. ಬಂಧನಕ್ಕೊಳಗಾದ ಉಗ್ರ ಮುಜಾಹಿದ್ ತುಮಕೂರಿನ ಪಿಹೆಚ್ ಕಾಲೋನಿಯಲ್ಲಿ ವಾಸವಾಗಿದ್ದ, ಈತನ ತಂದೆ ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ ಎಂದು ತಿಳಿದುಬಂದಿದೆ.
ಇನ್ನು ಮಂಗಳೂರಿನಲ್ಲಿ ಬಂಧನಕ್ಕೊಳಗಾಗಿದ್ದ ಶಂಕಿತ ಉಗ್ರ ನಜ್ಮೂಲ್ ಹುದಾ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಎಂಬ ಮಾಹಿತಿ ಬಯಲಾಗಿದೆ. ಮೈಸೂರು ರಸ್ತೆಯಲ್ಲಿರುವ ಆರ್ ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಹುದಾ 2011 ಇಂಜಿನಿಯರಿಂಗ್ ಗೆ ಸೇರ್ಪಡೆಯಾಗಿದ್ದ. ಆದರೆ 2014 ರಿಂದ ತರಗತಿಗಳಿಗೆ ಸರಿಯಾಗಿ ಹಾಜರಾಗದ ಕಾರಣ ಹಾಜರಾತಿ ಕೊರತೆಯಿಂದಾಗಿ ಪರೀಕ್ಷೆ ಬರೆಯಲು ಅನರ್ಹನಾಗಿದ್ದ, ಆತನಿಗೆ ಪರೀಕ್ಷೆ ಬರೆಯುವ ಅರ್ಹತೆ ಇರಲಿಲ್ಲ ಎಂದು ಕಾಲೇಜು ಪ್ರಾಧ್ಯಾಪಕ ಪ್ರೊ.ಡಾ.ಕೆ.ಎನ್ ಸುಬ್ರಹ್ಮಣ್ಯ ತಿಳಿಸಿದ್ದಾರೆ.
Advertisement