ಪಾಟ್ನಾ: 2015 ರ ಬಿಹಾರ ಚುನಾವಣೆಯಲ್ಲಿ ಜೆಡಿಯು ಮೈತ್ರಿಕೂಟಕ್ಕೆ ದೂರೆತ ಗೆಲುವಿನ ರೂವಾರಿ ಎಂದೇ ಗುರುತಿಸಲಾದ ಪ್ರಶಾಂತ್ ಕಿಶೋರ್ ಗೆ ನಿತೀಶ್ ಕುಮಾರ್ ಸಂಪುಟ ದರ್ಜೆ ಸ್ಥಾನ ನೀಡಿದ್ದಾರೆ.
ಪ್ರಶಾಂತ್ ಕಿಶೋರ್ ಅವರನ್ನು ಬಿಹಾರ ಮುಖ್ಯಮಂತ್ರಿ ಅವರ ಸಲಹೆಗಾರರಾಗಿ ನೇಮಕ ಮಾಡಿರುವುದರ ಬಗ್ಗೆ ಅಧಿಕೃತ ಆದೇಶ ಹೊರಬಿದ್ದಿದ್ದು, ಪ್ರಶಾಂತ್ ಕಿಶೋರ್ ಅವರಿಗೆ ಸಂಪುಟ ದರ್ಜೆ ಸ್ಥಾನ ನೀಡಲಾಗಿದೆ.
2014 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ಯಶಸ್ಸಿಗೆ ಕಾರಣವಾಗಿದ್ದ ಪ್ರಶಾಂತ್ ಕಿಶೋರ್ 2015 ರ ಬಿಹಾರ ವಿಧಾನಸಭಾ ಚುನಾವಣೆ ವೇಳೆ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷಕ್ಕೆ ಪ್ರಚಾರ ಕಾರ್ಯತಂತ್ರ ರೂಪಿಸುವ ಜವಾಬ್ದಾರಿ ಹೊತ್ತಿದ್ದರು. ಪ್ರಶಾಂತ್ ಕಿಶೋರ್ ಅವರ ಕಾರ್ಯತಂತ್ರ ಯಶಸ್ವಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಮತ್ತೊಮ್ಮೆ ಅಧಿಕಾರ ಪಡೆಯಲು ಸಹಕಾರಿಯಾಗಿತ್ತು. ಪ್ರಶಾಂತ್ ಕಿಶೋರ್ ಬಿಹಾರದ ಬಕ್ಸರ್ ಮೂಲದವರಾಗಿದ್ದು ಯುಎನ್ ಆರೋಗ್ಯ ತಜ್ಞನ ಕೆಲಸಕ್ಕೆ 2011 ರಲ್ಲಿ ರಾಜೀನಾಮೆ ನೀಡಿ ಭಾರತಕ್ಕೆ ವಾಪಸ್ಸಾಗಿದ್ದರು.
Advertisement