ನಾಗಪುರ: ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಅನಾಮಧೇಯ ಕರೆ ಬಂದ ಹಿನ್ನಲೆಯಲ್ಲಿ ಗೋಏರ್ ವೈಮಾನಿಕ ಸಂಸ್ಥೆಯ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಘಟನೆ ಶನಿವಾರ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ.
ಭುವನೇಶ್ವರ-ಮುಂಬೈ ನಡುವೆ ಸಂಚರಿಸುತ್ತಿದ್ದ ಗೋಏರ್ ಸಂಸ್ಥೆಯ ವಿಮಾನ ಸಂಖ್ಯೆ ಜಿ8 243 ಸಂಖ್ಯೆಯ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಬಿಜು ಪಟ್ನಾಯಕ್ ವಿಮಾನ ನಿಲ್ದಾಣಕ್ಕೆಕರೆ ಬಂದ ಹಿನ್ನಲೆಯಲ್ಲಿ ವಿಮಾನವನ್ನು ಇಂದು ನಾಗಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ವಿಮಾನದಲ್ಲಿ ಸಿಬ್ಬಂದಿಗಳು ಸೇರಿದಂತೆ ಸುಮಾರು 150 ಮಂದಿ ಇದ್ದರು ಎಂದು ತಿಳಿದುಬಂದಿದೆ.
ವಿಮಾನ ಭೂಸ್ಪರ್ಶ ಮಾಡುತ್ತಿದ್ದಂತೆಯೇ ಪ್ರಯಾಣಿಕರನ್ನು ಕೆಳಗೆ ಇಳಿಸಿದ ಭದ್ರತಾ ಸಿಬ್ಬಂದಿಗಳು ಕೂಡಲೇ ವಿಮಾನದಲ್ಲಿ ಶೋಧ ಕಾರ್ಯ ಆರಂಭಿಸಿದರು. ಬಾಂಬ್ ಡಿಟೆಕ್ಟರ್ ಗಳು ಮತ್ತು ಬಾಂಬ್ ನಿಷ್ಕ್ರಿಯ ಸಿಬ್ಬಂದಿಗಳು ವಿಮಾನದಲ್ಲಿ ಶೋಧ ನಡೆಸಿದರು. ಸತತ ಅರ್ಧ ಗಂಟೆಗೂ ಅಧಿಕ ಕಾಲ ಶೋಧ ನಡೆಸಿದರೂ ಯಾವುದೇ ಶಂಕಿತ ಸ್ಫೋಟಕಗಳು ಪತ್ತೆಯಾಗದ ಹಿನ್ನಲೆಯಲ್ಲಿ ಅಧಿಕಾರಿಗಳು ಇದು ಸುಳ್ಳು ಬೆದರಿಕೆ ಕರೆ ಎಂದು ನಿರ್ಧಾರಕ್ಕೆ ಬಂದರು. ಬಳಿಕ ವಿಮಾನದ ಪ್ರಯಾಣ ಮುಂದುವರಿಕೆಗೆ ಅನುವು ಮಾಡಿಕೊಟ್ಟರು.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಗೋಏರ್ ಸಂಸ್ಥೆ ವಕ್ತಾರರು, ವಿಮಾನದಲ್ಲಿ ಯಾವುದೇ ಶಂಕಿತ ವಸ್ತುಗಳು ಪತ್ತೆಯಾಗಿಲ್ಲ. ಪ್ರಯಾಣಿಕರಿಗೆ ಯಾವುದೇ ಅಪಾಯವಿಲ್ಲ ಎಂದು ಸ್ಪಷ್ಟನೆ ನೀಡಿದರು. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಕರೆ ಬಂದ ಮೊಬೈಲ್ ಸಂಖ್ಯೆಯನ್ನು ಪರಿಶೀಲನೆಗೊಳಪಡಿಸುತ್ತಿದ್ದಾರೆ.
Advertisement