ಪಣಜಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪುಣ್ಯತಿಥಿಯಂದೇ ನಾಥೋರಾಮ್ ಗೋಡ್ಸೆ ಕುರಿತ ಪುಸ್ತಕ ಬಿಡುಗಡೆಯಾಗುವುದನ್ನು ಗೋವಾ ಫಾರ್ವಡ್ ಪಕ್ಷ ತೀವ್ರ ವಿರೋಧಿಸಿದೆ.
ನಾಳೆ ಅಂದರೆ ಜನವರಿ 30ರಂದು ಮಹಾತ್ಮ ಗಾಂಧೀಜಿ ಪುಣ್ಯತಿಥಿಯಾಗಿದ್ದು ಅಂದೇ ಗಾಂಧಿ ಕೊಂದ ನಾಥೋರಾಮ್ ಗೋಡ್ಸೆ ಪುಸ್ತಕ ಬಿಡುಗಡೆಯಾಗುತ್ತಿದೆ. ಇದಕ್ಕೆ ಗೋವಾ ಫಾರ್ವಡ್ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ದೇಶಪ್ರೇಮವಿರೋಧಿಗಳು ಇಂತಹ ಕಾರ್ಯಕ್ರಮಗಳಿಗೆ ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದೆ. ಅಲ್ಲದೆ ಈ ಕಾರ್ಯಕ್ರಮ ನಡೆಯದಂತೆ ತಾವು ಪಣಜಿಯ ರವೀಂಧ್ರ ಭವನದ ಎದುರು ಸತ್ಯಾಗ್ರಹ ಕೂರುತ್ತೇವೆ ಎಂದು ಜಿಎಫ್ ಪಿ ಎಚ್ಚರಿಕೆ ನೀಡಿದೆ.
"ನಮ್ಮ ಪ್ರತಿಭಟನೆಗೆ ವಿವಿಧ ಸಂಘ-ಸಂಸ್ಥೆಗಳು ಕೈಜೋಡಿಸುತ್ತಿದ್ದು, ಶಾಸಕ ವಿಜಯ್ ಸರ್ದೇಸಾಯಿ ಅವರು ಕೂಡ ಕೈಜೋಡಿಸಲಿದ್ದಾರೆ. ಪಕ್ಷದ ಕಾರ್ಯಕರ್ತರು ರಸ್ತೆಗಳನ್ನು ತಡೆದು, ಯಾರೂ ಕೂಡ ಆ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ತೆರಳದಂತೆ ತಡೆಯುತ್ತಾರೆ ಎಂದು ಜಿಎಫ್ ಪಕ್ಷದ ಕಾರ್ಯದರ್ಶಿ ಮೋಹನ್ ದಾಸ್ ಲೋಲಿಯಕರ್ ಅವರ ಹೇಳಿದರು. ಅಲ್ಲದೆ ತಮ್ಮ ಪ್ರತಿಭಟನೆ ಶಾಂತಿಯುತವಾಗಿ ಸಾಗಲಿದೇ ಎಂದೂ ತಿಳಿಸಿದರು.
ಪುಸ್ತಕ ಬಿಡುಗಡೆಯನ್ನು ವಿರೋಧಿ ಜಿಎಫ್ ಪಕ್ಷ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ ಮಾಡಿದ್ದು, ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ.
Advertisement