ಹೈದರಾಬಾದ್: ತೆಲಂಗಾಣ ರಾಜ್ಯದ ನಲ್ಗೊಂಡ ಜಿಲ್ಲೆಯ ವ್ಯವಸಾಯ ಭೂಮಿಯಲ್ಲಿ ಕೊರೆಯಲಾಗಿದ್ದ ಕೊಳವೆ ಬಾವಿಗೆ 2 ವರ್ಷದ ಬಾಲಕಿ ಬಿದ್ದಿರುವ ಆಘಾತಕಾರಿ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ನಲ್ಗೊಂಡ ಜಿಲ್ಲೆಯ ಶಾಲಿಗೌರರಾಮ್ ಮಂಡಳದ ವಲ್ಲಾಲ್ ಹಳ್ಳಿಯ ನಿಂಬೆ ತೋಟದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಸಾನ್ವಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಾಳೆ.
ಸಾನ್ವಿಯ ಪೋಷಕರು ಇದೇ ತೋಟದಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗಷ್ಟೇ ತೋಟದ ಮಾಲೀಕ ಕೊಳವೆ ಬಾವಿಯೊಂದನ್ನು ಕೊರೆಸಿದ್ದರು. ಆದರೆ ನೀರು ಸಿಗಲಿಲ್ಲ. ಇದೇ ತೋಟದಲ್ಲಿ ಸಾನ್ವಿ ಪೋಷಕರು ವಾಸವಾಗಿದ್ದು, ಇಂದು ಮಧ್ಯಾಹ್ನ ಆಟವಾಡುತ್ತಿದ್ದ ಸಾನ್ವಿ ಆಯಾ ತಪ್ಪಿ ಕೊಳವೆ ಬಾವಿಗೆ ಬಿದ್ದಿದ್ದಾಳೆ. ಕೂಡಲೇ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.
ಆಂಬುಲೇನ್ಸ್ ಜತೆ ವೈದ್ಯರ ತಂಡ ಸ್ಥಳಕ್ಕೆ ಧಾವಿಸಿ ಮಗುವಿಗೆ ಉಸಿರಾಟಕ್ಕೆ ಅನುಕೂಲವಾಗುವಂತೆ ಕೊಳವೆ ಮೂಲಕ ಆಮ್ಲಜನಕ ಪೂರೈಸುವ ವ್ಯವಸ್ಥೆ ಮಾಡಿದ್ದಾರೆ. ಮಗು 20 ಅಡಿ ಆಳದಲ್ಲಿ ಸಿಲುಕಿರುವ ಬಗ್ಗೆ ಅಗ್ನಿ ಶಾಮಕ ಸಿಬ್ಬಂದಿ ಶಂಕೆ ವ್ಯಕ್ತಪಡಿಸಿದ್ದು, ಕೊಳವೆ ಬಾವಿ ಸುತ್ತ ಇರುವ ಮಣ್ಣನ್ನು ಜೆಸಿಬಿ ಮೂಲಕ ತೆರವುಗೊಳಿಸುವ ಮೂಲಕ ಮಗುವಿನ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ.
Advertisement