
ನವದೆಹಲಿ: 'ತುಲ್ಲಾ' ಪದ ಬಳಕೆ ಮಾಡಿ ಪೊಲೀಸರ ವಿರುದ್ಧ ಅವಹೇಳನಕಾರಿ ಮಾತನಾಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪದ ಬಳಕೆ ಕುರಿತಂತೆ ಸ್ಪಷ್ಟನೆ ನೀಡುವಂತೆ ದೆಹಲಿ ಹೈಕೋರ್ಟ್ ಬುಧವಾರ ಕೇಜ್ರಿವಾಲ್ ಅವರಿಗೆ ಸೂಚಿಸಿದೆ.
ದೆಹಲಿಯಲ್ಲಿ ಪೊಲೀಸರನ್ನು ನಿಂದಿಸುವ ಸಲುವಾಗಿ ಅಲ್ಲಿನ ಜನರು ತುಲ್ಲಾ ಎಂಬ ಪದವನ್ನು ಬಳಸುತ್ತಾರೆ. ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ್ದ ಕೇಜ್ರಿವಾಲ್ ಅವರು ದೆಹಲಿ ಪೊಲೀಸರನ್ನು ತುಲ್ಲಾ ಎಂದು ಕರೆದಿದ್ದರು. ತುಲ್ಲಾ ಪೊಲೀಸರು ರಸ್ತೆ ಬದಿಗಳಲ್ಲಿ ವ್ಯಾಪಾರಿಗಳಿಂದ ಲಂಚವನ್ನು ಪಡೆಯುತ್ತಿರುತ್ತಾರೆ. ಅವರ ವಿರುದ್ಧ ಕ್ರಮಕೈಗೊಳ್ಳುವಾಗ ಅಡ್ಡಿಪಡಿಸುವುದು ಸರಿಯಲ್ಲ ಎಂದು ಹೇಳಿದ್ದರು.
ಕೇಜ್ರಿವಾಲ್ ಅವರು ಪೊಲೀಸರ ವಿರುದ್ಧ ಬಳಸಿರುವ ಪದದಿಂದ ಇಡೀ ಪೊಲೀಸ್ ಪಡೆಗೆ ಅವಮಾನವಾಗಿದೆ ಎಂದು ಆರೋಪಿಸಿ ಪೇದೆಯೊಬ್ಬರು ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ದಾಖಲಿಸಿದ್ದರು.
ಇದರಂತೆ ಪ್ರಕರಣವನ್ನು ಇಂದು ವಿಚಾರಣೆ ನಡೆಸಿರುವ ನ್ಯಾಯಾಮೂರ್ತಿ ಮುಕ್ತ ಗುಪ್ತ ಅವರು ,ಕೇಜ್ರಿವಾಲ್ ಅವರಿಗೆ ನಿರಾಳವನ್ನು ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಜಾರಿಯಾಗಬೇಕಿದ್ದ ಸಮನ್ಸ್ ನ್ನು ಆಗಸ್ಟ್ 21 ರವರೆಗೆ ತಡೆಹಿಡಿದಿದ್ದಾರೆ.
ಅಲ್ಲದೆ, ಪೊಲೀಸರ ವಿರುದ್ಧ ಬಳಸಿರುವ ಪದದ ಕುರಿತಂತೆ ಕೇಜ್ರಿವಾಲ್ ಅವರು ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಬೇಕು. ಹಿಂದಿ ಭಾಷೆಯಲ್ಲಿ ಕೇಜ್ರಿವಾಲ್ ಅವರು ಬಳಸಿರುವ ಪದ ಯಾವುದೇ ನಿಘಂಟಿನಲ್ಲೂ ಇಲ್ಲ. ನೀವು ಪದ ಬಳಕೆ ಮಾಡಿದ್ದೇ ಆಗಿದ್ದರೆ, ನಿಮಗೆ ಆ ಪದದ ಅರ್ಥ ತಿಳಿದಿರಬೇಕು. ಈ ಪದವನ್ನು ನಾನು ಎಲ್ಲಿಯೂ ಬಳಕೆ ಮಾಡಿರುವುದನ್ನು ನೋಡಿಲ್ಲ ಎಂದು ಹೇಳಿದ್ದಾರೆ.
ವಿಚಾರಣೆ ವೇಳೆ ಕೇಜ್ರಿವಾಲ್ ಪರ ವಕೀಲ ಎನ್.ಹರಿಹರನ್ ಅವರು ವಾದ ಮಂಡಿಸಿದ್ದರು. ಪದ ಬಳಕೆ ಎಲ್ಲಾ ಪೊಲೀಸರು ಹೇಳಿರುವಂತಹದ್ದಲ್ಲ. ಭಷ್ಟಾಚಾರದಲ್ಲಿ ತೊಡಗಿಕೊಳ್ಳುತ್ತಿರುವ ಪೊಲೀಸರಿಗೆ ಮಾತ್ರ ಬಳಕೆ ಮಾಡಿರುವುದಾಗಿದೆ ಎಂದು ಹೇಳಿದ್ದಾರೆ.
ಲಜಪತ್ ನಗರ ಪೊಲೀಸ್ ಠಾಣೆಯಲ್ಲಿ ತನೇಜಾ ಎಂಬ ಪೇದೆಯೊಬ್ಬರು ಕೇಜ್ರಿವಾಲ್ ಅವರು ಪೊಲೀಸರ ವಿರುದ್ಧ ಬಳಸಿದ ಪದ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲ್ ಅವರೇ ಪೊಲೀಸರ ವಿರುದ್ಧ ಈ ರೀತಿಯಾಗಿ ಪದ ಬಳಕೆ ಮಾಡುತ್ತಿದ್ದರೆ, ಸಾರ್ವಜನಿಕರು ಏನು ಮಾಡುತ್ತಾರೆ. ಸಾರ್ವಜನಿಕರಿಗೆ ಪೊಲೀಸರ ಮೇಲೆ ಅಗೌರವ ಮೂಡುತ್ತದೆ ಎಂದು ಹೇಳಿಕೊಂಡಿದ್ದರು.
Advertisement