ಜಾಹ್ನವಿ
ದೇಶ
ಶ್ರೀನಗರದಲ್ಲಿ ರಾಷ್ಟ್ರಧ್ವಜ ಹಾರಿಸಿಯೇ ಸಿದ್ಧ: ಲುಧಿಯಾನಾ ಬಾಲಕಿ ಜಾಹ್ನವಿ ಘೋಷಣೆ
ಜವಹರಲಾಲ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ ನಾಯಕ ಕನ್ನಯ್ಯ ಕುಮಾರ್ ನ ವಿರುದ್ಧ ಹೇಳಿಕೆ ...
ನವದೆಹಲಿ: ಜವಹರಲಾಲ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ ನಾಯಕ ಕನ್ನಯ್ಯ ಕುಮಾರ್ ನ ವಿರುದ್ಧ ಹೇಳಿಕೆ ನೀಡಿ ಸುದ್ದಿಯಾಗಿದ್ದ ಪಂಜಾಬ್ ರಾಜ್ಯದ ಲುಧಿಯಾನ ಮೂಲದ ಬಾಲಕಿ, ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ಪ್ರತಿಭಟನೆ ಪೀಡಿತ ಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿ ನಮ್ಮ ರಾಷ್ಟ್ರಧ್ವಜವನ್ನು ಹಾರಿಸುವುದಾಗಿ ಘೋಷಿಸಿದ್ದಾಳೆ.
ಅಲ್ಲಿನ ಜನರು ರಾಷ್ಟ್ರಧ್ವಜವನ್ನು ಅವಮಾನಿಸಿದ್ದಾರೆ. ಅಲ್ಲಿನ ವಿದ್ಯಾರ್ಥಿಗಳು ಪಾಕಿಸ್ತಾನದ ಧ್ವಜವನ್ನು ಹಾರಿಸಿದ್ದಾರೆ. ಇದು ನಿಜಕ್ಕೂ ನಮಗೆ ಅವಮಾನ. ಅವರಿಗೆ ನಮ್ಮ ರಾಷ್ಟ್ರಧ್ವಜದ ಗೌರವವೇನೆಂದು ತೋರಿಸಲು ತ್ರಿವರ್ಣ ಧ್ವಜವನ್ನು ಅವರ ಮುಂದೆ ಹಾರಿಸಿ ತೋರಿಸುತ್ತೇನೆ, ಅವರು ತಡೆಯುತ್ತಾರೆಯೇ ಎಂದು ನೋಡೋಣ ಎಂದಿದ್ದಾಳೆ 15 ವರ್ಷದ ಲುಧಿಯಾನಾದ ಜಾಹ್ನ್ವಿ ಬೆಹಾಲ್.
ಪ್ರತ್ಯೇಕತಾವಾದಿ ಉಗ್ರಗಾಮಿ ನಾಯಕ ಬುರ್ಹಾನ್ ವಾನಿಯ ಹತ್ಯೆಯನ್ನು ಖಂಡಿಸಿ ಜಮ್ಮು-ಕಾಶ್ಮೀರದ ಶ್ರೀನಗರದ ವಿವಿಧ ಭಾಗಗಳಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವಿನ ಘರ್ಷಣೆಯಲ್ಲಿ ಇದುವರೆಗೆ 45 ಮಂದಿ ಸಾವನ್ನಪ್ಪಿದ್ದಾರೆ.
ದೇಶದ್ರೋಹದ ಆರೋಪದ ಮೇಲೆ ಪ್ರಧಾನಿ ಮೋದಿಯವರನ್ನು ಟೀಕಿಸಿದ್ದ ಕನ್ನಯ್ಯ ಕುಮಾರ್ ನನ್ನು ಸಾರ್ವಜನಿಕವಾಗಿ ಚರ್ಚೆಗೆ ಆಹ್ವಾನಿಸಿ ಜಾಹ್ನ್ವಿ ಸುದ್ದಿಯಾಗಿದ್ದಳು. ಭಾರತ ದೇಶದ ವಿರುದ್ಧವಾಗಿ ಯಾರು ಮಾತನಾಡುತ್ತಾರೆಯೋ ಅವರು ದೇಶಕ್ಕೆ ಕಳಂಕ ತರಲು ನೋಡುತ್ತಿದ್ದಾರೆ ಎನ್ನುತ್ತಾಳೆ.
ಕನ್ನಯ್ಯ ಕುಮಾರ್ ಹೇಳಿಕೆ, ಬಂಧನ, ದೇಶ, ಮೋದಿಯವರ ಬಗ್ಗೆ ಅನೇಕ ಹೇಳಿಕೆ ನೀಡಿ, ಬರೆದು ಟ್ವಿಟ್ಟರ್ ನಲ್ಲಿ ಆಕೆಗೆ ಪರ-ವಿರೋಧ ಪ್ರತಿಕ್ರಿಯೆ ಕೇಳಿಬಂದಿತ್ತು. ಲುಧಿಯಾನಾದಲ್ಲಿ ಆಕೆ ಸೆಲೆಬ್ರಿಟಿಯಾದಳು. ಪ್ರಧಾನಿಗೆ ಅನೇಕ ಪತ್ರಗಳನ್ನು ಬರೆದಿದ್ದಳು. ಅದರಲ್ಲಿ ಒಂದು ಪತ್ರಕ್ಕೆ ಆಕೆಗೆ ಪ್ರಧಾನಿ ಕಡೆಯಿಂದ ಶ್ಲಾಘನೆ ಕೇಳಿಬಂದಿತ್ತು. ಸ್ವಚ್ಛ ಭಾರತ ಅಭಿಯಾನ ಜಾರಿಯಲ್ಲಿ ಆಕೆಯ ಪಾತ್ರವನ್ನು ಪ್ರಧಾನಿ ಹೊಗಳಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ