ಚಮೋಲಿ: ಕಣಿವೆ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಚೀನಾ ಸೈನಿಕರ ಸಂಖ್ಯೆಯನ್ನು ಹೆಚ್ಚಿಸಿರುವುದಾಗಿ ಉತ್ತರಾಖಂಡ್ ಮುಖ್ಯಮಂತ್ರಿ ಹರಿಶ್ ರಾವತ್ ಅವರು ಬುಧವಾರ ಖಚಿತಪಡಿಸಿದ್ದಾರೆ.
ಮಾಧ್ಯದೊಂದಿಗೆ ಮಾತನಾಡಿದ ರಾವತ್, ಚಮೋಲಿಯಲ್ಲಿ ಚೀನಾ ಭದ್ರತೆ ಹೆಚ್ಚಿಸಿರುವ ಮಾಹಿತಿ ನಿಜ ಮತ್ತು ಸಮರ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಗಡಿ ಪ್ರದೇಶ ಇದುವರೆಗೂ ಶಾಂತಿಯುತವಾಗಿದೆ ಮತ್ತು ಮೊದಲಿನಿಂದಲೂ ಈ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದೇವೆ ಎಂದರು.
ರಾಜ್ಯ ಕಂದಾಯ ಅಧಿಕಾರಿಗಳು ಭೂಮಾಪನಕ್ಕೆ ತೆರಳಿದ ಸಂದರ್ಭದಲ್ಲಿ ಚೀನಾ ಸೈನಿಕರ ಚಲನವಲನ ಹೆಚ್ಚಾಗಿರುವುದು ಪತ್ತೆಯಾಗಿದೆ ಎಂದು ಉತ್ತರಾಖಂಡ್ ಸಿಎಂ ತಿಳಿಸಿದ್ದಾರೆ.
ಇನ್ನು ಗಡಿಯಲ್ಲಿ ಚೀನಾ ಸೈನಿಕರ ಸಂಖ್ಯೆ ಹೆಚ್ಚಳವಾಗಿರುವ ಬಗ್ಗೆ ಐಟಿಬಿಪಿ ಜುಲೈ 19ರಂದು ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿರುವುದಾಗಿ ಎಎನ್ಐ ವರದಿ ಮಾಡಿದೆ.
ಈ ಮಧ್ಯೆ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ಆರ್.ಕೆ.ಸಿಂಗ್ ಅವರು, ನಿಜವಾದ ಗಡಿ ನಿಯಂತ್ರಣ ರೇಖೆಯನ್ನು ಇದುವರೆಗೂ ಗುರುತಿಸಿಲ್ಲ. ಗಡಿ ನಿಯಂತ್ರಣ ರೇಖೆ ಗುರುತಿಸಬೇಕು ಎಂದು ನಾವು ಬಯಸುತ್ತೇವೆ. ಆದರೆ ಚೀನಾ ಇದಕ್ಕೆ ಸಹಕರಿಸುತ್ತಿಲ್ಲ ಎಂದಿದ್ದಾರೆ.