ಕಿಡ್ನಾಪ್ ಮಾಡಿದ 90 ನಿಮಿಷದಲ್ಲೇ 6 ವರ್ಷದ ಬಾಲಕನನ್ನು ರಕ್ಷಿಸಿದ ಪೊಲೀಸರು
ತಿರುಪುರ: ಶಾಲೆಗೆ ತೆರಳಿದ್ದ ಆರು ವರ್ಷದ ಬಾಲಕನನ್ನು ಕಿಡ್ನಾಪ್ ಮಾಡಿದ್ದ ಆರೋಪಿಯನ್ನು ಬಂಧಿಸಿರುವ ತಿರುಪುರ ಪೊಲೀಸರು ಬಾಲಕನನ್ನು ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿಸಿದ್ದಾರೆ.
ತಮಿಳುನಾಡಿನ ತಿರುಪುರ್ ನ ಬ್ರಿಗೇಡ್ ವೇ ಕಾಲೋನಿಯ ಶಾಲೆಯೊಂದರಲ್ಲಿ ಓದುತ್ತಿರುವ ಆರು ವರ್ಷದ ಅರಿಯಾ ನರಸಿಂಹನ್ ಎಂಬ ವಿದ್ಯಾರ್ಥಿಯನ್ನು ಬೈಕ್ ನಲ್ಲಿ ಬಂದ ಇಬ್ಬರು ಕರೆದೊಯ್ದಿದ್ದರು. ಇದನ್ನು ಗಮನಿಸಿ ಶಾಲಾ ವ್ಯಾನ್ ಚಾಲಕ ಶಾಲೆಯ ಆಡಳಿತ ಮಂಡಳಿಗೆ ವಿಷಯ ತಿಳಿಸಿದ.
ನಂತರ ಆಡಳಿತ ಮಂಡಳಿ ಪೋಷಕರಿಗೆ ಕರೆ ಮಾಡಿದ್ದಾರೆ. ತಾವು ಮಗುವನ್ನು ಕರೆದುಕೊಂಡು ಬರಲು ಯಾರನ್ನು ಕಳುಹಿಸಿಲ್ಲ ಎಂದು ಪೋಷಕರು ಸ್ಪಷ್ಟ ಪಡಿಸಿದ್ದಾರೆ. ಶಾಲಾ ಆಡಳಿತ ಮಂಡಳಿ ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ಜಿಲ್ಲೆಯ ಎಲ್ಲಾ ಚೆಕ್ ಪೋಸ್ಟ್ ಗಳಿಗೆ ವಿಶಯ ಮುಟ್ಟಿಸಿದ್ದಾರೆ.
ಧರ್ಮಪುರದ ಸುಮಾರು 10 ಕಿಮೀ ದೂರದಲ್ಲಿ ಪಳನಿ ರಸ್ತೆಯಲ್ಲಿ ಬಾಲಕನೊಂದಿಗೆ ಆರೋಪಿ ಸಿಕ್ಕಿಬಿದ್ದಿದ್ದಾನೆ. ಅಪಹರಣಗೊಂಡ 90 ನಿಮಿಷಗಳಲ್ಲೇ ಪೊಲೀಸರು ಆರೋಪಿ ದೇವರಾಜ್ ನನ್ನು ಬಂಧಿಸಿದ್ದಾರೆ.
ಬಾಲಕನ ತಂದೆ ಸೆಂಥಿಲ್ ಕುಮಾರ್ ವೈದ್ಯರಾಗಿದ್ದು, ಅವಿನಾಶಿ ರಸ್ತೆಯಲ್ಲಿ ಆಸ್ಪತ್ರೆ ನಡೆಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ದೇವರಾಜ್ ಕೆಲಸ ಮಾಡುತ್ತಿದ್ದು ಕೆಲ ತಿಂಗಳ ಹಿಂದೆ ಜಗಳ ಮಾಡಿಕೊಂಡು ಕೆಲಸ ಬಿಟ್ಟಿದ್ದ.
ಗುರುವಾರ ಬೆಳಗ್ಗೆ ಶಾಲೆಯ ವಾಹನ ಹಿಂಬಾಲಿಸಿದ ದೇವರಾಜ್ ಬಾಲಕನನ್ನು ಕಿಡ್ನಾಪ್ ಮಾಡಿ 2.5 ಕೋಟಿ ಹಣಕ್ಕಾಗಿ ಬೇಡಿಕೆ ಇಡಲು ನಿರ್ಧರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ