ಗುವಾಹತಿ: ಅಸ್ಸಾಂನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಉಂಟಾಗದಿರುವ ಭೀಕರ ಪ್ರವಾಹದಿಂದಾಗಿ ಈ ವರೆಗೂ ಸಾವನ್ನಪ್ಪಿದವರ ಸಂಖ್ಯೆ 29ಕ್ಕೇರಿಕೆಯಾಗಿದೆ.
ಬರ್ಪೇಟಾ, ದರಂಗ್ ಮತ್ತು ಗೋಲ್ ಪುರ ಜಿಲ್ಲೆಗಳಲ್ಲಿ ತಲಾ ಒಂದೊಂದು ಶವಗಳು ಪತ್ತೆಯಾಗಿದ್ದು, ಆ ಮೂಲಕ ಅಸ್ಸಾಂ ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ 29ಕ್ಕೆ ಏರಿಕೆಯಾದಂತಾಗಿದೆ. ಅಸ್ಸಾಂ ನ 28 ಜಿಲ್ಲೆಗಳು ಪ್ರವಾಹದ ಹೊಡೆತಕ್ಕೆ ಸಿಲುಕಿದ್ದು, ಸುಮಾರು 36 ರಿಂದ 37 ಲಕ್ಷ ಜನರು ಪ್ರವಾಹದಿಂದಾಗಿ ನಿರಾಶ್ರಿತರಾಗಿದ್ದಾರೆ. ಪ್ರಮುಖವಾಗಿ ರಾಜ್ಯದ ಬ್ರಹ್ಮುಪುತ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹವಾಮಾನ ಇಲಾಖೆ ಮತ್ತೆರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದೆ.
ಹೀಗಾಗಿ ಈ ಭಾಗದ ನದಿ ತೀರದ ಪ್ರದೇಶಗಳಲ್ಲಿ ಪ್ರವಾಹ ಹೆಚ್ಚಾಗುವ ಭೀಕಿ ಎದುರಾಗಿದ್ದು, ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಈ ವರೆಗೂ 970 ಗಂಜಿ ಕೇಂದ್ರಗಳು ಹಾಗೂ ನಿರಾಶ್ರಿತ ಶಿಬಿರಗಳನ್ನು ತೆರೆದಿದ್ದು, ಇವುಗಳಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಆಶ್ರಯ ಪಡೆದಿದ್ದಾರೆ.
ಅಲ್ಲದೆ ವಿವಿಧ ಸಾಮಾಜಿಕ ಸಂಘಟನೆಗಳು, ಸ್ವಯಂ ಸೇವಾ ಕಾರ್ಯಕರ್ತರು ವಿವಿಧ ಮೂಲಗಳಿಂದ ದೇಣಿಗೆ ಸಂಗ್ರಹಿಸಿ ನಿರಾಶ್ರಿತ ಶಿಬಿರದಲ್ಲಿರುವ ಜನರಿಗೆ ಅಗತ್ಯ ವಸ್ತುಗಳನ್ನು ನೀಡುತ್ತಿದ್ದಾರೆ. ಇನ್ನು ಸರ್ಕಾರ ನಿರ್ಮಿಸಿರುವ ನಿರಾಶ್ರಿತ ಶಿಬಿರಗಳಲ್ಲಿನ ನಿರಾಶ್ರಿತರ ಸಂಖ್ಯೆ ದಿನೇ ದಿನೇ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಗ್ಲಾ ಫೋಟೋ ತೋರಿಸಿ ಅಮಾನತ್ತಾದ ಅಧಿಕಾರಿ
ಇನ್ನು ಅಸ್ಸಾಂ ಪ್ರವಾಹ ನಿಮಿತ್ತ ಅಸ್ಸಾಂನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಅಧಿಕಾರಿಗಳಿಂದ ಈ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಅಧಿಕಾರಿಯೊಬ್ಬರು ಬಾಂಗ್ಲಾದೇಶದಲ್ಲಿ ಈ ಹಿಂದೆ ಸಂಭವಿಸಿದ್ದ ಪ್ರವಾಹದ ಫೋಟೋವನ್ನು ಅಸ್ಸಾಂ ಕಾಜಿರಂಗ ಪ್ರವಾಹದ್ದು ಎಂದು ಹೇಳಿ ನೀಡಿದ್ದರು. ಬಳಿಕ ಅದು ಬಾಂಗ್ಲಾದೇಶ ಪ್ರವಾಹದ ಫೋಟೋ ಎಂದು ತಿಳಿಯುತ್ತಿದ್ದಂತೆಯೇ ಅಸ್ಸಾಂ ಸರ್ಕಾರ ಆ ಅಧಿಕಾರಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಕೇಂದ್ರ ಸಚಿವರಿಗೆ ವರದಿ ನೀಡಬೇಕು ಎಂಬ ತರಾತುರಿಯಲ್ಲಿ ಅಸ್ಸಾಂ ಪ್ರವಾಹದ ಚಿತ್ರ ನೀಡಿಬೇಕಿದ್ದ ಅಧಿಕಾರಿ ಬಾಂಗ್ಲಾದೇಶ ಪ್ರವಾಹದ ಚಿತ್ರ ನೀಡಿ ಇದೀಗ ಅಮಾನತುಗೊಳ್ಳುವಂತಾಗಿದೆ.
Advertisement