ಶ್ರೀನಗರ: ಸತತ ಮೂರು ದಿನಗಳ ಕಾಲ ಹಗಲು ರಾತ್ರಿ ಎನ್ನದೇ ಕಾರ್ಯಾಚರಣೆ ನಡೆಸಿ ಹಿಜ್ಬುಲ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ವನಿ ಹತ್ಯೆ ಗೈದ ಭಾರತೀಯ ಸೇನಾಪಡೆಯ ಕಾರ್ಯಾಚರಣೆ ಆಕಸ್ಮಿಕ ಘಟನೆ ಎಂದು ಹೇಳುವ ಮೂಲಕ ಜಮ್ಮು ಮತ್ತು ಕಾಶ್ಮೀರ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ವಿವಾದಕ್ಕೀಡಾಗಿದ್ದಾರೆ.
ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ ಮತ್ತು ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ನಿರ್ಮಲ್ ಸಿಂಗ್ ಅವರು ಉಗ್ರ ಬುರ್ಹಾನ್ ವನಿ ಕುರಿತಂತೆ ಹೇಳಿಕೆ ನೀಡಿ ಇದೀಗ ವಿವಾದಕ್ಕೀಡಾಗಿದ್ದು, ಉಗ್ರಕಮಾಂಡರ್ ಹತ್ಯೆ ಆಕಸ್ಮಿಕ ಘಟನೆ ಎಂದು ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿರ್ಮಲ್ ಸಿಂಗ್ ಅವರು, ಸೇನಾಪಡೆಗಳು ಉಗ್ರರ ಅಡಗುದಾಣದ ಮೇಲೆ ದಾಳಿ ನಡೆಸುವ ಮುನ್ನ ಆ ಮನೆಯಲ್ಲಿ ಬುರ್ಹಾನ್ ವನಿ ಇರುವಿಕೆ ಕುರಿತು ಮೊದಲೇ ಅರಿಯಬೇಕಿತ್ತು. ಆತನಿಗೆ ಒಂದು ನೀಡಬೇಕಿತ್ತು ಎಂದು ಹೇಳಿದ್ದಾರೆ. ಸೇನಾಪಡೆಗಳ ಕಾರ್ಯಾಚರಣೆಯನ್ನು ಆಕಸ್ಮಿಕ ಘಟನೆ ಎಂದು ಹೇಳಿರುವ ನಿರ್ಮಲ್ ಸಿಂಗ್, ಬುರ್ಹಾನ್ ವನಿ ಇರುವಿಕೆ ಕುರಿತು ಮಾಹಿತಿ ತಿಳಿದಿದರೆ ಖಂಡಿತ ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿತ್ತು ಎಂದು ಹೇಳಿ ಇದೀಗ ವಿವಾದಕ್ಕೀಡಾಗಿದ್ದಾರೆ.
ನಿರ್ಮಲ್ ಸಿಂಗ್ ಹೇಳಿಕೆಗೆ ಇದೀಗ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ನಿರ್ಮಲ್ ಸಿಂಗ್ ರ ಉಗ್ರರ ಪರ ಹೇಳಿಕೆಗೆ ವಿವಾದಕ್ಕೀಡಾಗಿದೆ. ಈ ವಿಚಾರ ಸುದ್ದಿವಾಹಿನಿಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದಂತೆಯೇ ಎಚ್ಚೆತ್ತ ನಿರ್ಮಲ್ ಸಿಂಗ್ ತಮ್ಮ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದ್ದು, ಕಾಶ್ಮೀರದಲ್ಲಿ ಉಂಟಾಗಬಹುದಾಗಿದ್ದ ಗಲಭೆ ಕುರಿತಂತೆ ಮುಂಜಾಗ್ರತೆ ಕೈಗೊಳ್ಳಬಹುದಾಗಿತ್ತು ಎಂದು ತಾವು ಹೇಳಿದ್ದು ಎಂದು ತೇಪೆ ಹಚ್ಚಲು ಪ್ರಯತ್ನಿಸಿದ್ದಾರೆ. ಅಲ್ಲದೆ ವನಿ ಹತ್ಯೆ ಮತ್ತು ಆ ಬಳಿಕದ ಪರಿಸ್ಥಿತಿ ಗಂಭೀರ ವಿಚಾರವಾಗಿದ್ದು, ಬಗ್ಗೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಒಟ್ಟಾರೆ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಮತ್ತು ಸ್ಥಳೀಯ ಜನರ ಓಲೈಕೆಗಾಗಿ ಯೋಧರ ಕಾರ್ಯಾಚರಣೆಯನ್ನು ಉಗ್ರನೋರ್ವನ ಪರವಾಗಿ ಮಾತನಾಡುವ ಮೂಲಕ ತುಚ್ಛವಾಗಿ ಕಾಣುತ್ತಿರುವ ರಾಜಕಾರಣಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
Advertisement