ನವದೆಹಲಿ: ವಿವಾದಿತ ಅಯೋಧ್ಯೆ ರಾಮಮಂದಿರ ವಿಚಾರವನ್ನು ಬಿಜೆಪಿ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದು, ಮಂದಿರ ನಿರ್ಮಾಣ ವಿಚಾರದಲ್ಲಿ ದ್ವಿಮುಖವಾಗಿ ಮಾತನಾಡುತ್ತಿರುವುದನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ನಿಲ್ಲಿಸಬೇಕೆಂದು ಕಾಂಗ್ರೆಸ್ ಬುಧವಾರ ಹೇಳಿದೆ.
ನಿನ್ನೆಯಷ್ಟೇ ಉತ್ತರಪ್ರದೇಶದಲ್ಲಿ ಬಿಜೆಪಿ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಅಯೋಧ್ಯೆ ರಾಮ ಮಂದಿರ ವಿಚಾರ ಕುರಿತು ಅಮಿತ್ ಶಾ ಅವರು ಮಾತನಾಡಿದ್ದರು. ರಾಮಮಂದಿರ ನಿರ್ಮಾಣ ಬಿಜೆಪಿಯ ಮೊದಲ ಆದ್ಯತೆಯಾಗಿದ್ದು, ಚುನಾವಣಾ ಪ್ರಣಾಳಿಕೆಯಲ್ಲಿ ಇದನ್ನು ನಮೂದಿಸಲಾಗಿದೆ. ಮುಂದಿನ ವರ್ಷ ರಾಮಮಂದಿರ ನಿರ್ಮಾಣವಾಗಲಿದೆ ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದರು.
ಶಾ ಅವರ ಈ ಹೇಳಿಕೆ ಸಂಬಂಧ ಇಂದು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಅವರು, ಮಂದಿರ ನಿರ್ಮಾಣ ವಿವಾದ ಕುರಿತಂತೆ ಸುಪ್ರೀಂಕೋರ್ಟ್ ವರದಿ ಬರುವವರೆಗೂ ಈ ಬಗ್ಗೆ ಏನನ್ನೂ ಮಾತನಾಡದಂತೆ ಕಾಂಗ್ರೆಸ್ ನಿರ್ಧರಿಸಿದೆ. ಇದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಅಮಿತ್ ಶಾ ಅವರನ್ನು ಒಂದು ಪ್ರಶ್ನೆ ಕೇಳಲು ಇಚ್ಛಿಸುತ್ತೇನೆ. ಆದೇಶ ಹೊರಬೀಳದೆಯೇ ನಿಮ್ಮ ಪಕ್ಷದವರು ಮಂದಿರ ನಿರ್ಮಾಣ ಕುರಿತಂತೆ ಹೇಗೆ ಹೇಳಿಕೆ ನೀಡುತ್ತಿದ್ದಾರೆ.
ಅಮಿತ್ ಶಾ ಅವರೇ ನಿಮ್ಮ ದ್ವಿಮುಖ ಮಾತುಗಳನ್ನು ನಿಲ್ಲಿಸಿ. ಸಮಸ್ಯೆ ಈಡೇರಿಸಲು ನಿಮಗೆ ಇಷ್ಟವಿಲ್ಲ. ವಿವಾದವನ್ನು ಜೀವಂತವಾಗಿಟ್ಟು ರಾಜಕೀಯ ಗಾಳವಾಗಿ ಬಳಸಿಕೊಳ್ಳುವುದೇ ನಿಮಗೆ ಬೇಕಿದೆ ಎಂದು ಹೇಳಿದ್ದಾರೆ.
Advertisement