ತುನಿ ಘರ್ಷಣೆ: ಬಂಧಿತರ ಬಿಡುಗಡೆಗೆ ಆಗ್ರಹಿಸಿ ಕಾಪು ಮುಖಂಡರಿಂದ ಮತ್ತೆ ಉಪವಾಸ ಸತ್ಯಾಗ್ರಹ

ಕಾಪು ಸಮುದಾಯಕ್ಕೆ ಮೀಸಲಾತಿಗಾಗಿ ಆಗ್ರಹಿಸಿ ನಡೆಸಿದ್ದ ಪ್ರತಿಭಟನೆ ವೇಳೆ ನಡೆದಿದ್ದ ಹಿಂಸಾಚಾರ ಪ್ರಕರಣ ಸಂಬಂಧ ಬಂಧಿತರಾಗಿರುವವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಸಮುದಾಯದ ಮುಖಂಡ ಮುದ್ರಗಡ ಪದ್ಮನಾಭಂ ಅವರು ಮತ್ತೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ...
ಉಪವಾಸ ನಿರತ ಮುದ್ರಗಡ ಪದ್ಮನಾಭಂ (ಸಂಗ್ರಹ ಚಿತ್ರ)
ಉಪವಾಸ ನಿರತ ಮುದ್ರಗಡ ಪದ್ಮನಾಭಂ (ಸಂಗ್ರಹ ಚಿತ್ರ)

ಅಮರಾವತಿ: ಕಾಪು ಸಮುದಾಯಕ್ಕೆ ಮೀಸಲಾತಿಗಾಗಿ ಆಗ್ರಹಿಸಿ ನಡೆಸಿದ್ದ ಪ್ರತಿಭಟನೆ ವೇಳೆ ನಡೆದಿದ್ದ ಹಿಂಸಾಚಾರ ಪ್ರಕರಣ ಸಂಬಂಧ ಬಂಧಿತರಾಗಿರುವವರನ್ನು ಕೂಡಲೇ ಬಿಡುಗಡೆ  ಮಾಡಬೇಕು ಎಂದು ಆಗ್ರಹಿಸಿ ಸಮುದಾಯದ ಮುಖಂಡ ಮುದ್ರಗಡ ಪದ್ಮನಾಭಂ ಅವರು ಮತ್ತೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

ಮುದ್ರಗಡ ಪದ್ಮನಾಭಂ ಅವರ ಕಿರ್ಲಂಪುಡಿಯಲ್ಲಿರುವ ಸ್ವಗೃಹದಿಂದಲೇ ಅವರು ಆಮರಾಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ಬಂಧಿತ ಪ್ರತಿಭಟನಾಕಾರರನ್ನು ಬಿಡುಗಡೆ  ಮಾಡುವವರೆಗೂ ತಾವು ಸತ್ಯಾಗ್ರಹ ಕೈಬಿಡುವುದಿಲ್ಲವೆಂದು ಪಟ್ಟು ಹಿಡಿದ್ದಾರೆ. ಇನ್ನು ಮುದ್ರಗಡ ಅವರೊಂದಿಗೆ ಅವರ ಪತ್ನಿ ಪದ್ಮಾವತಿ ಅವರು ಕೂಡ ಸಾಥ್ ನೀಡುತ್ತಿದ್ದು, ಇಂದು ಬೆಳಗ್ಗೆ  9ಗಂಟೆಯಿಂದಲೇ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ ಎಂದು ತಿಳಿದುಬಂದಿದೆ.



ಕಾಪು ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಕಳೆದ ಜನವರಿ ತಿಂಗಳಲ್ಲಿ ತುನಿ ರೈಲು ನಿಲ್ದಾಣದಲ್ಲಿ ನಡೆದಿದ್ದ ವ್ಯಾಪಕ ಹಿಂಸಾಚಾರ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ  ಸಿಐಡಿ ಆಧಿಕಾರಿಗಳು ಸೋಮವಾರ ಐದು ಮಂದಿಯನ್ನು ಬಂಧಿಸಿದ್ದರು. ಈ ಬಂಧನವನ್ನು ವಿರೋಧಿಸಿದ್ದ ಮುದ್ರಗಡ ಅವರು ಬಂಧಿತರ ಬಿಡುಗಡೆಗೆ ಆಗ್ರಹಿಸಿದ್ದರು. ಆದರೆ ಮುದ್ರಗಡ ಅವರ  ಮನವಿಗೆ ಆಂಧ್ರ ಪ್ರದೇಶ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂಧಿಸದ ಹಿನ್ನಲೆಯಲ್ಲಿ ಮುದ್ರಗಡ ಪದ್ಮನಾಭಂ ಅವರು ಇಂದು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಇನ್ನು ಕಳೆದ ಜನವರಿ ತಿಂಗಳಲ್ಲಿ ನಡೆದಿದ್ದ ವ್ಯಾಪಕ ಹಿಂಸಾಚಾರ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಆಂಧ್ರ ಪ್ರದೇಶ ಸರ್ಕಾರ ಕಾಪು ಸಮುದಾಯಕ್ಕೆ ಮೀಸಲಾತಿ ನೀಡುವ ಸಂಬಂಧ  ಕಾರ್ಯಪ್ರವೃತ್ತವಾಗಿದ್ದು, ಕೆಲ ತಿಂಗಳ ಕಾಲಾವಕಾಶ ನೀಡುವಂತೆ ಅಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಮುದ್ರಗಡ ಕುಟುಂಬದ ಬಳಿ ಕಾಲಾವಕಾಶ ಕೇಳಿದ್ದಾರೆ.  ಆದರೆ ಸಿಎಂ ಮಾತಿನ ಭರವಸೆ ಇಲ್ಲದ ಮುದ್ರಗಡ ಕುಟುಂಬ ಉಪವಾಸ ಆರಂಭಿಸಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com