ಲಖನೌ: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನದಲ್ಲಿ ಹಿಂದೂ ಕುಟುಂಬಗಳು ಸಾಮೂಹಿಕ ವಲಸೆ ಹೋಗುತ್ತಿರುವ ವಿಷಯದ ಬಗ್ಗೆ ವಸ್ತುಸ್ಥಿತಿಯನ್ನು ವರದಿ ಮಾಡಲು ಬಿಜೆಪಿ 9 ಸದಸ್ಯರ ಸಮಿತಿಯನ್ನು ರಚಿಸಿದೆ.
ಬಿಜೆಪಿ ರಚಿಸಿರುವ ಸತ್ಯಶೋಧನಾ ಸಮಿತಿ ಕೈರಾನದಲ್ಲಿ ಹಿಂದೂ ಕುಟುಂಬಗಳು ಸಾಮೂಹಿಕ ವಲಸೆ ಹೋಗುತ್ತಿರುವುದರ ಹಿಂದಿನ ಕಾರಣವನ್ನು ಪತ್ತೆ ಮಾಡಲಿದ್ದು, ಈ ಬಗ್ಗೆ ಶೀಘ್ರವೇ ವರದಿ ನೀಡಲಿದೆ. 346 ಹಿಂದೂ ಕುಟುಂಬಗಳು ಸಾಮೂಹಿಕ ವಲಸೆ ಹೋಗಿರುವುದರ ಕುರಿತು ಬಿಜೆಪಿ ಸಂಸದ, ಮಾಜಿ ಕೇಂದ್ರ ಸಚಿವ ಹುಕುಂ ಸಿಂಗ್ ಮಾಹಿತಿ ನೀಡಿದ ಬೆನ್ನಲ್ಲೇ ಬಿಜೆಪಿ ಸಮಿತಿಯನ್ನು ರಚಿಸಿದೆ.
ಸಾಮೂಹಿಕ ವಲಸೆ ಕುರಿತು ಮಾಹಿತಿ ಬಿಡುಗಡೆ ಮಾಡಿದ್ದ ಬಿಜೆಪಿ ಸಂಸದ ಹುಕುಂ ಸಿಂಗ್, 2014 ರಿಂದ ಹಿಂದೂ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗುತ್ತಿದ್ದು, ಮುಸ್ಲಿಮರು ಬಹುಸಂಖ್ಯಾತರಿರುವ ಕೈರಾನದಲ್ಲಿ ಹಿಂದೂಗಳನ್ನೂ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲದೇ 10 ಕೋಮು ಹತ್ಯೆಗಳು ಸಂಭವಿಸಿದ್ದು ಉತ್ತರ ಪ್ರದೇಶದ ಕೈರಾನದಲ್ಲಿ ಮಿನಿ ಕಾಶ್ಮೀರ ನಿರ್ಮಾಣವಾಗುತ್ತಿದೆ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲದೇ ಇತ್ತೀಚೆಗೆ ಮಹಿಳೆ ಮೇಲೆ ಅತ್ಯಾಚಾರ ನಡೆದಿದ್ದರು ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಇರುವುದೂ ಪೊಲೀಸರ, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶಗೊಳ್ಳಲು ಕಾರಣವಾಗಿದೆ. ಹಿಂದೂಗಳ ಸಾಮೂಹಿಕ ವಲಸೆ ಕುರಿತು 9 ಸದಸ್ಯರ ಸಮಿತಿ ನಿಡುವ ವರದಿಯನ್ನಾಧರಿಸಿ ಅಖಿಲೇಶ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಬಿಜೆಪಿ ಸಿದ್ಧತೆ ನಡೆಸಿದೆ.
Advertisement