ಅಲಹಬಾದ್: ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಅಸ್ಸಾಂನಂತೆ ಈಗ ಉತ್ತರ ಪ್ರದೇಶದಲ್ಲೂ ಬಿಜೆಪಿಗೆ ಅವಕಾಶ ನೀಡುವಂತೆ ಸೋಮವಾರ ಕರೆ ನೀಡಿದರು.
ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯ ನಂತರ ಪರಿವರ್ತನಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಜ್ಯಾತಿ, ಕೋಮುವಾದ, ಸ್ವಜನ ಪಕ್ಷಪಾತ ಗೂಂಡಾಗಿರಿಗೆ ಸಮಾಜವಾದಿ ಪಕ್ಷ ಕಾರಣ ಎಂದು ಆರೋಪಿಸಿದರು.
ಸುಮಾರು 30 ವರ್ಷಗಳ ನಂತರ ಭಾರತಲ್ಲಿ ಸ್ಪಷ್ಟ ಬಹುಮತದ ಸರ್ಕಾರ ರಚನೆಯಾಗಿದೆ. ಇದರ ಗೌರವ ಉತ್ತರ ಪ್ರದೇಶಕ್ಕೆ ಸಲ್ಲುತ್ತದೆ. ಈ ರಾಜ್ಯ ದೇಶರಕ್ಷಣೆಗೆ ಯಾವುತ್ತೂ ಮುಂದೆ ಬರುತ್ತದೆ. ಈಗ ಉತ್ತರ ಪ್ರದೇಶದಲ್ಲಿ ಅಸ್ಸಾಂನಂತಹ ಬದಲಾವಣೆ ಬೇಕಾಗಿದೆ ಎಂದು ಮೋದಿ ಹೇಳಿದರು.
ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ತಲಾ 5 ವರ್ಷಗಳಂತೆ ಈ ರಾಜ್ಯವನ್ನು ಲೂಟಿ ಮಾಡಿವೆ ಎಂದು ಆರೋಪಿಸಿದ ಪ್ರಧಾನಿ, ಬಿಜೆಪಿ ಅಭಿವೃದ್ಧಿಯ ಅಭಿಯಾನವನ್ನು ಆರಂಭಿಸಿದೆ. ಅಭಿವೃದ್ಧಿಗಾಗಿ ಬಿಜೆಪಿಗೆ ಅವಕಾಶ ನೀಡಿ. ಕೋಮುವಾದಿ ಬೀಜಗಳನ್ನು ವಂಶಾಡಳಿತವನ್ನು ಮತ್ತು ಭ್ರಷ್ಟಾಚಾರವನ್ನು ಕಿತ್ತು ಹಾಕಿದಾಗಲೇ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.