ಅಗತ್ಯ ವಸ್ತುಗಳ ಬೆಲೆಯೇರಿಕೆ: ಸಚಿವರ ಉನ್ನತ ಮಟ್ಟದ ಸಭೆ
ನವದೆಹಲಿ: ಆಹಾರ ಪದಾರ್ಥಗಳು, ತರಕಾರಿಗಳ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಬುಧವಾರ ಅಪರಾಹ್ನ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ.
ತರಕಾರಿ ಬೆಲೆ ವಿಪರೀತ ಏರಿಕೆಯಾಗಿರುವುದರ ಕುರಿತು ಚರ್ಚೆ ನಡೆಸುವುದು ಸಭೆಯ ಮುಖ್ಯ ವಿಷಯವಾಗಿದೆ. ತರಕಾರಿ ಹಣದುಬ್ಬರ ಶೇಕಡಾ 2.21ರಿಂದ ಮುಂದಿನ ತಿಂಗಳು ಶೇಕಡಾ 12.94ಕ್ಕೆ ಏರಿಕೆಯಾಗಿದೆ. ಟೊಮ್ಯಾಟೊ ಬೆಲೆ ಕೆಜಿಗೆ ಬೆಂಗಳೂರಿನಲ್ಲಿ 60ರಿಂದ 70 ರೂಪಾಯಿಗಳಿದ್ದರೆ ಹೈದರಾಬಾದ್ ನಲ್ಲಿ 100 ರೂಪಾಯಿಗೆ ಮುಟ್ಟಿದೆ. ಆಲೂಗಡ್ಡೆ, ಈರುಳ್ಳಿ ಬೆಲೆ ಕೂಡ ಗಗನಕ್ಕೇರಿದೆ.
ಇನ್ನು ಧಾನ್ಯಗಳ ಬೆಲೆ ಕೆಜಿಗೆ 170 ರೂಪಾಯಿಗೆ ಏರಿಕೆಯಾಗಿದ್ದು, ಕಳೆದ ವರ್ಷ ಜನವರಿಯಿಂದ ಮೊನ್ನೆ ಮೇವರೆಗೆ ಹಣದುಬ್ಬರ ಶೇಕಡಾ 35.56ಕ್ಕೆ ಹೆಚ್ಚಾಗಿದೆ. ಇನ್ನು ತೈಲ ಬೆಲೆ ಕೂಡ ಮುಂದಿನ ಹಣಕಾಸು ವರ್ಷದಲ್ಲಿ ಮೂರು ಪಟ್ಟು ಹೆಚ್ಚಾಗಲಿದೆ ಎಂದು ಆರ್ಥಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಈ ಎಲ್ಲಾ ವಿಷಯಗಳು, ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಇಂದಿನ ಸಭೆಯಲ್ಲಿ ಚರ್ಚೆಯಾಗಲಿದೆ. ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು,ನಿತಿನ್ ಗಡ್ಕರಿ, ರಾಮ್ ವಿಲಾಸ್ ಪಾಸ್ವಾನ್, ರಾಧಾ ಮೋಹನ್ ಸಿಂಗ್, ನಿರ್ಮಲಾ ಸಿತಾರಾಮ್ ಮತ್ತು ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯನ್, ಉನ್ನತ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಆಹಾರ ಪದಾರ್ಥಗಳು ಮತ್ತು ತರಕಾರಿಗಳ ಬೆಲೆ ನಿಯಂತ್ರಿಸಲು ಸರ್ಕಾರ ಹೆಚ್ಚಿನ ಪೂರ್ವಭಾವಿ ನಿರ್ವಹಣೆಯನ್ನು ತೆಗೆದುಕೊಳ್ಳಬೇಕೆಂದು ಭಾರತೀಯ ಆರ್ಥಿಕ ಮತ್ತು ಕೈಗಾರಿಕೆ ಒಕ್ಕೂಟ(ಎಫ್ಐಸಿಸಿಐ) ತಿಳಿಸಿದ್ದು, ಹಣದುಬ್ಬರ ಆರ್ ಬಿಐ ಸೂಚನೆ ಪಥದೊಳಗೆ ನಿಲ್ಲಲಿದೆ ಎಂದು ಹೇಳಿದೆ.
ಸರ್ಕಾರ ಬೆಲೆ ಏರಿಕೆಯನ್ನು ಬಹಳ ಹತ್ತಿರದಿಂದ ಗಮನಿಸುತ್ತಿದ್ದು ಸರಿಯಾದ ಸಮಯಕ್ಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ