ಇಶ್ರಾತ್'ಳಿಗೆ ಸಂಶಯದ ಲಾಭ ಅನ್ವಯವಾಗಬೇಕು: ಜಿ.ಕೆ. ಪಿಳ್ಳೈ
ನವದೆಹಲಿ: ಸಾಕಷ್ಟು ವಿವಾದ ಹಾಗೂ ಅನುಮಾನಗಳನ್ನು ಸೃಷ್ಟಿ ಮಾಡಿರುವ ಗುಜರಾತ್ ಎನ್ ಕೌಂಟರ್ ಪ್ರಕರಣದಲ್ಲಿ 2013ರಲ್ಲಿ ಅಂದಿನ ಗೃಹ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಜಿ.ಕೆ. ಪಿಳ್ಳೈ ಅವರು ನೀಡಿದ್ದ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಇಶ್ರಾತ್ ಜಹಾನ್ ಪ್ರಕರಣ ಸಂಬಂಧ 2013ರಲ್ಲಿ ಮಾತನಾಡಿದ್ದ ಪಿಳ್ಳೈ ಅವರು, ಗುಜರಾತ್ ನಲ್ಲಿ ಎನ್ ಕೌಂಟರ್ ಆದ ಇಶ್ರಾತ್ ಜಹಾನ್ ಪ್ರಕರಣ ಸಂಬಂಧ ನಿರ್ಣಾಯಕ ಸಾಕ್ಷ್ಯಾಧಾರಗಳು ಸಿಕ್ಕಿರುವುದು ಅನುಮಾನವಾಗಿದೆ. ಅಲ್ಲದೆ, ಆಕೆ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಸದಸ್ಯಳು ಎನ್ನುವುದಕ್ಕೂ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಪ್ರಕರಣ ಸಂಬಂಧ ಸರಿಯಾದ ರೀತಿಯಲ್ಲಿ ತನಿಖೆ ನಡೆಸಬೇಕಿದ್ದು, ಇಶ್ರಾತ್ ಳಿಗೆ ಸಂಶಯದ ಲಾಭ ಅನ್ವಯವಾಗಬೇಕು.
ಇಶ್ರಾತ್ ಬಗ್ಗೆ ನಿರ್ಣಾಯಕ ದಾಖಲೆಗಳು ಲಭ್ಯವಾಗಿಲ್ಲ. ಆದರೆ, ಸಾಕಷ್ಟು ಅನುಮಾನಗಳು ಮೂಡಿವೆ. ಮದುವೆಯಾದ ಓರ್ವ ಮುಸ್ಲಿಂ ಯುವತಿ ವಿವಾಹಿತ ವ್ಯಕ್ತಿಯೊಂದಿಗೆ ವಿವಿಧ ಪ್ರದೇಶಗಳಿಗೆ ಹೊರಹೋಗುವುದನ್ನು ಹಾಗೂ ರಾತ್ರಿಯಿಡೀ ಆತನ ಜೊತೆ ಕಾಲ ಕಳೆಯುವುದನ್ನು ಯಾರೂ ಒಪ್ಪುವುದಿಲ್ಲ. ಎಲ್ಲೋ ತಪ್ಪು ನಡೆಯುತ್ತಿದೆ ಎಂಬುದರ ಬಗ್ಗೆ ಆಕೆಗೂ ಅರಿವಿತ್ತು. ಇಶ್ರತ್ ಎಲ್ ಇಟಿ ಉಗ್ರ ಸಂಘಟನೆಯವಳೆಂಬುದಕ್ಕೆ ಸೂಕ್ತ ದಾಖಲೆಗಳು ಲಭ್ಯವಿಲ್ಲ. ಆದರೆ ಆಕೆ ಜಾವಿದ್ ಜೊತೆ ಪ್ರಯಾಣ ಮಾಡುತ್ತಿದ್ದದ್ದು ಹಲವು ಪ್ರಶ್ನೆಗಳಿಗೆ ದಾರಿ ಮಾಡಿಕೊಟ್ಟಿದೆ ಎಂದು ಹೇಳಿದ್ದರು. ಇದೀಗ ಅಂದಿನ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ಪಿಳ್ಳೈ ಅವರು, ಹತ್ಯೆಗೀಡಾದ ಇಶ್ರಾತ್ ಹಾಗೂ ಇತರ ಮೂವರು ಲಷ್ಕರ್ ಸಂಘಟನೆಯ ನಂಟಿನ ಬಗ್ಗೆ ಸ್ಪಷ್ಟ ಸಾಕ್ಷ್ಯಾಧಾರಗಳಿಲ್ಲವೆಂದು ಹೇಳುವ ಎರಡನೇ ಅಫಿಡವಿಟ್ ನ್ನು ಅಂದಿನ ಗೃಹ ಸಚಿವರಾಗಿದ್ದ ಚಿದಂಬರಂ ಅವರು ತಿದ್ದುಪಡಿ ಮಾಡಿದ್ದರು ಎಂದು ಹೇಳಿದ್ದರು. ಇದೀಗ ಈ ಹೇಳಿಕೆ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.
2013ರಲ್ಲಿ ನೀಡಲಾಗಿದ್ದ ತಮ್ಮ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿರುವ ಪಿಳ್ಳೈ ಅವರು, ಇಶ್ರಾತ್ ಪ್ರಕರಣ ಸಂಬಂಧ ಈ ಹಿಂದೆ ಹೇಳಿಕೆಯನ್ನು ನೀಡಿದ್ದೆ. ಅದು ಅಂದಿನ ವಾಸ್ತವಕ್ಕೆ ಸಂಬಂಧಿಸಿದ್ದಾಗಿತ್ತು. ನನಗೆ ಸತ್ತ ವ್ಯಕ್ತಿಯ ಹೆಸರು ಕೆಡಿಸಬೇಕೆಂಬ ಯಾವುದೇ ಉದ್ದೇಶವಿರಲಿಲ್ಲ. ಈಗಲೂ ಹೇಳುತ್ತೇನೆ. ಇಶ್ರಾತ್ ಎಲ್ ಇಟಿ ಸಂಘಟನೆಯ ಸದಸ್ಯೆ ಆಗಿದ್ದಳು ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಸೂಕ್ತ ದಾಖಲೆಗಳು ಲಭ್ಯವಾಗಿಲ್ಲ. ಆದರೆ, ಆಕೆ ವಿವಾಹಿತ ವ್ಯಕ್ತಿಯೊಂದಿಗೆ ಪ್ರಯಾಣ ಮಾಡುತ್ತಿದ್ದದ್ದು ಅನುಮಾನಗಳಿಗೆ ಕಾರಣ ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ