ಲುಧಿಯಾನ: ಜೆಎನ್ ಯು ವಿವಾದ ಸಂಬಂಧ ಬಂಧಿತನಾಗಿ ದೇಶಾದ್ಯಂತ ತೀವ್ರ ಚರ್ಚೆಗೀಡಾಗಿದ್ದ ವಿದ್ಯಾರ್ಥಿ ಸಂಘನೆ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಗೆ ಲುಧಿಯಾನ ಮೂಲದ 15 ವರ್ಷದ ಬಾಲಕಿ ಸಾವಾಲು ಹಾಕಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ತನ್ನೊಂದಿಗೆ ಚರ್ಚೆಗೆ ಬನ್ನಿ ಎಂದು ಹೇಳಿದ್ದಾಳೆ.
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡು ಗಣರಾಜ್ಯೋತ್ಸವದಲ್ಲಿ ಪ್ರಶಸ್ತಿಗೆ ಪಾತ್ರಳಾಗಿದ್ದ ಲುಧಿಯಾನ ಮೂಲದ ಝಾನ್ವಿ ಬೆಹ್ಲ್ ಎಂಬ ಬಾಲಕಿ ಇದೀಗ ಕನ್ಹಯ್ಯಾಗೆ ನೇರ ಸವಾಲೊಡ್ಡಿದ್ದು, ಚರ್ಚೆಗೆ ಬರುವಂತೆ ಸಾವಾಲೆಸೆದಿದ್ದಾಳೆ. "ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆ ಆರಿಸಿದ ಪ್ರಜಾಪ್ರತಿನಿಧಿಯಾಗಿದ್ದು, ಅವರ ವಿರುದ್ಧ ಮಾತನಾಡುವ ಮೊದಲು ಒಮ್ಮೆ ಯೋಚಿಸಿ. ಮೋದಿ ಅವರನ್ನು ನಿಂದಿಸುವುದು ಸರಿಯಲ್ಲ. ಅವರು ದೇಶದ ಜನರಿಂದ ಚುನಾಯಿತರಾದವರು ಎನ್ನುವುದು ನಿಮಗೆ ನೆನಪಿರಲಿ, ಅವರ ಕುರಿತು ಕೆಟ್ಟಭಾಷೆ ಬಳಸುವುದು ಒಳ್ಳೆಯದಲ್ಲ ಎಂದು ಝಾನ್ವಿ ಎಚ್ಚರಿಸಿದ್ದಾಳೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಮಾತನಾಡುವ ನೀವು ನಿಮ್ಮ ವಾದ ಸರಿಯಿದ್ದರೆ ನನ್ನೊಂದಿಗೆ ಚರ್ಚೆಗೆ ಬನ್ನಿ ಎಂದು ಸವಾಲೆಸೆದಿದ್ದಾಳೆ. "ಸಂವಿಧಾನ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ ಎಂದ ಮಾತ್ರಕ್ಕೆ ನಾವು ನಮ್ಮ ಮಿತಿಯನ್ನು ಮೀರಿ ಎಲ್ಲರನ್ನು ನಿಂದಿಸುವುದು ಸರಿಯಲ್ಲ.
ಅತ್ತ ಗಡಿಯಲ್ಲಿ ನಮ್ಮ ಯೋಧರು ಪಾಕಿಸ್ತಾನಿ ಪಡೆಗಳಿಂದ ದೇಶವನ್ನು ರಕ್ಷಿಸಲು ತಮ್ಮ ಪ್ರಾಣ ತ್ಯಾಗ ಮಾಡುತ್ತಿದ್ದರೆ ಇತ್ತ ಜೆಎನ್ ಯುನಲ್ಲಿ ವಿದ್ಯಾರ್ಥಿಗಳು ದೇಶ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಕೆಲ ರಾಜಕೀಯ ನಾಯಕರು ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿದು ತಮ್ಮ ರಾಜಕೀಯ ಹಿತಾಸಕ್ತಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನರೇಂದ್ರ ಮೋದಿ ಅವರು ದೇಶದ ಜನತೆಯಿಂದ ಆಯ್ಕೆಯಾದ ಪ್ರಧಾನಿಯಾಗಿದ್ದು, ಅವರನ್ನು ನಿಂದಿಸಿದರೆ ಭಾರತ ದೇಶವನ್ನು ನಿಂದಿಸಿದಂತೆ. ಹೀಗಾಗಿ ದೇಶದ ಪ್ರಧಾನಿಯನ್ನು ನಿಂದಿಸುವ ಮುನ್ನ ಯೋಚನೆ ಮಾಡಿ ಎಂದು ಝಾನ್ವಿ ಹೇಳಿದ್ದಾರೆ.
Advertisement