ಇಶ್ರಾತ್ ಪ್ರಕರಣ: ಹಳೇ ಕಡತಗಳ ಪರಿಶೀಲನೆಗೆ ಮುಂದಾದ ಸರ್ಕಾರ

2004ರಲ್ಲಿ ಗುಜರಾತ್ ನಲ್ಲಿ ನಡೆದ ಎನ್ ಕೌಂಟರ್ ಪ್ರಕರಣದಲ್ಲಿ ಹತ್ಯೆಯಾದ ಇಶ್ರಾತ್ ಜಹಾನ ಪ್ರಕರಣ ಇದೀಗ ಹಲವು ವಿವಾದಕ್ಕೆ ಕಾರಣವಾಗಿದ್ದು, ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಅಧಿಕಾರಿಗಳು ಹೇಳಿಕೆ ನೀಡುವ ಮುಖಾಂತರ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ...
ಇಶ್ರಾತ್ ಪ್ರಕರಣ: ಹಳೇ ಕಡತಗಳ ಪರಿಶೀಲನೆಗೆ ಮುಂದಾದ ಸರ್ಕಾರ
ಇಶ್ರಾತ್ ಪ್ರಕರಣ: ಹಳೇ ಕಡತಗಳ ಪರಿಶೀಲನೆಗೆ ಮುಂದಾದ ಸರ್ಕಾರ

ನವದೆಹಲಿ: 2004ರಲ್ಲಿ ಗುಜರಾತ್ ನಲ್ಲಿ ನಡೆದ ಎನ್ ಕೌಂಟರ್ ಪ್ರಕರಣದಲ್ಲಿ ಹತ್ಯೆಯಾದ ಇಶ್ರಾತ್ ಜಹಾನ ಪ್ರಕರಣ ಇದೀಗ ಹಲವು ವಿವಾದಕ್ಕೆ ಕಾರಣವಾಗಿದ್ದು, ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಅಧಿಕಾರಿಗಳು ಹೇಳಿಕೆ ನೀಡುವ ಮುಖಾಂತರ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಹೀಗಾಗಿ ಇಶ್ರಾತ್ ಪ್ರಕರಣ ಕುರಿತಂತೆ ಅಧಿಕಾರಿಗಳು ಹಳೇ ಕಡತಗಳನ್ನು ಪರಿಶೀಲನೆ ನಡೆಸಲು ತೀರ್ಮಾನಿಸಿದ್ದಾರೆಂದು ಹೇಳಲಾಗುತ್ತಿದೆ.

ಈ ಹಿಂದೆ ಖಾಸಗಿ ಮಾಧ್ಯಮವೊಂದರಲ್ಲಿ ಮಾತನಾಡಿದ್ದ ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಇಶ್ರಾತ್ ಪ್ರಕರಣ ಸಂಬಂಧ ಸಾಕಷ್ಟು ಮಾಹಿತಿಗಳನ್ನು ಬಹಿರಂಗ ಪಡಿಸಿದ್ದರು. ಪ್ರಕರಣ ಸಂಬಂಧ 2ನೇ ಅಫಿಡವಿಟ್ ನಲ್ಲಿ ಇಶ್ರತ್ ಎಲ್ ಇಟಿ ಉಗ್ರ ಸಂಘಟನೆಯ ನಂಟಿನ ಮಾಹಿತಿಯನ್ನು ಯುಪಿಎ ಸರ್ಕಾರ ಬದಲಾಯಿಸಿತ್ತು ಎಂದು ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಆರೋಪಿಸಿದ್ದರು. ಅಲ್ಲದೆ, ಗುಜರಾತ್ ನಲ್ಲಿ ನಡೆದ ಎನ್ ಕೌಂಟರ್ ನಕಲಿಯೇ ಅಥವಾ ಅಸಲಿಯೇ ಎಂಬುದರ ಕುರಿತಂತೆ ತನಿಖೆಯಾಗಬೇಕಿದೆ ಎಂದು ಹೇಳಿದ್ದರು.

ಪಿಳ್ಳೈ ಹೇಳಿಕೆ ನಂತರ ಮತ್ತಷ್ಟು ಅಧಿಕಾರಿಗಳು ಹೇಳಿಕೆ ನೀಡಲು ಆರಂಭಿಸಿದ್ದರು. ಇದರಂತೆ ಇಶ್ರಾತ್ ಜಹಾನ್ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಬಾರಿಗೆ ಸಲ್ಲಿಸಲಾಗಿದ್ದ ಪ್ರಮಾಣಪತ್ರ ಪಿ ಚಿದಂಬರಂ ಅವರಿಂದ ನಿರ್ದೇಶಿಸಲ್ಪಟ್ಟಿತ್ತು. ಅಂದಿನ ಗುಜರಾತ್ ಮುಖ್ಯಮಂತ್ರಿ, ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎನ್ ಕೌಂಟರ್ ಪ್ರಕರಣದಲ್ಲಿ ಸಿಲುಕಿಸಲು ಇಶ್ರಾತ್ ಜಹಾನ್ ಗೆ ಸಂಬಂಧಿಸಿದಂತೆ ಬದಲಾವಣೆ ಮಾಡಿ ಸಲ್ಲಿಸಲಾಗಿದ್ದ ಎರಡನೇ ಅಫಿಡವಿಟ್ ನ್ನು ಗೃಹ ಕಾರ್ಯದರ್ಶಿಗಿಂತ ಮೇಲಿದ್ದ ಅಂದಿನ ಗೃಹ ಸಚಿವ ಪಿ ಚಿದಂಬರಂ ನಿರ್ದೇಶಿಸಿದ್ದರು ಎಂದು ಮಾಜಿ ಅಧೀನ ಕಾರ್ಯದರ್ಶಿ ಆರ್ ವಿ ಎಸ್ ಮಣಿ ಹೇಳಿದ್ದರು.

ಇಶ್ರಾತ್ ಜಹಾನ್ ಳ ಭಯೋತ್ಪಾದಕ ಹಿನ್ನೆಲೆಗೆ ಸಂಬಂಧಿಸಿದಂತೆ 2009 ನೆ ಆಗಸ್ಟ್ ನಲ್ಲಿ ನಿರ್ದೇಶಕರೊಂದಿಗೆ ಸೇರಿ ಅಧೀನಕಾರ್ಯದರ್ಶಿ ಆರ್ ವಿ ಎಸ್ ಮಣಿ ಸಿದ್ಧಪಡಿಸಿದ್ದ ಮೊದಲನೇ ಅಫಿಡವಿಟ್ ನಲ್ಲಿ ಇಶ್ರಾತ್ ಜಹಾನ್  ಉಗ್ರಳು ಹಾಗೂ ಆಕೆಯೊಂದಿಗೆ ಹತ್ಯೆಗೀಡಾದ ಮೂವರು ಎಲ್ ಇ ಟಿ ಉಗ್ರರು ಎಂಬುದನ್ನು ಸ್ಪಷ್ಟಪಡಿಸಲಾಗಿತ್ತು.  ನಕಲಿ ಎನ್ ಕೌಂಟರ್ ಎಂದು ಹಣೆಪಟ್ಟಿ ಕಟ್ಟಲಾಗಿದ್ದ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಲು ಮಣಿ ಆಕ್ಷೇಪ ವ್ಯಕ್ತಪಡಿಸಿದ್ದರು. ಮೊದಲನೇ ಅಫಿಡವಿಟ್ ಸಲ್ಲಿಕೆಯಾದ ನಂತರ ಎರಡನೇ ಅಫಿಡವಿಟ್ ನ್ನು ನೀಡಿ ಸಿಸಿಎಸ್ ನಡವಳಿಕೆಯ ನಿಯಮಗಳ ಪ್ರಕಾರ ಎರಡನೇ ಅಫಿಡವಿಟ್ ಗೆ ಸಹಿ ಹಾಕಲು ತಮಗೆ ನಿರ್ದೇಶನ ನೀಡಲಾಗಿತ್ತು ಎಂದು  ಆರ್ ವಿ ಎಸ್ ಮಣಿ ಹೇಳಿದ್ದರು.

ನಂತರ ಹೇಳಿಕೆ ನೀಡಿದ್ದ ಪ್ರಕರಣ ಸಂಬಂಧ ಸಿಬಿಐ ತನಿಖೆಯಲ್ಲಿ ಪಾಲ್ಗೊಂಡಿದ್ದ ಐಪಿಎಸ್ ಅಧಿಕಾರಿ ಸತೀಶ್ ವರ್ಮಾ ಅವರು, 2004ರಲ್ಲಿ ಗುಜರಾತ್ ನಲ್ಲಿ ನಡೆದ ಎನ್ ಕೌಂಟರ್ ಪ್ರಕರಣದಲ್ಲಿ ಸಾವನ್ನಪ್ಪಿದ್ದ ಇಶ್ರಾತ್ ಜಹಾನ್'ಳದ್ದು ಪೂರ್ವ ನಿಯೋಜಿತ ಹತ್ಯೆಯಾಗಿತ್ತು. ಎನ್ ಕೌಂಟರ್ ನಡೆಸುವ ಮೊದಲೇ ಗುಪ್ತಚರ ಬ್ಯೂರೋ ಅಧಿಕಾರಿಗಳು ಇಶ್ರಾತ್ ಮತ್ತು ಇತರೆ ಮೂವರನ್ನು ಬಂಧಿಸಿದ್ದರು. ಆರೋಪಿ ಉಗ್ರರೊಂದಿಗೆ ಹೆಣ್ಣುಮಗಳೊಬ್ಬಳಿದ್ದಾಳೆ ಎಂಬ ಯಾವುದೇ ಮಾಹಿತಿಯೂ ಗುಪ್ತಚರ ಸಂಸ್ಥೆಗಳಿಂದ ಬಂದಿರಲಿಲ್ಲ. ಆದರೂ ಕೂಡ ಇಶ್ರಾತ್ ಸೇರಿದಂತೆ ನಾಲ್ವರನ್ನು ಅಕ್ರಮವಾಗಿ ವಶದಲ್ಲಿಟ್ಟುಕೊಂಡ ಅಧಿಕಾರಿಗಳು, ನಂತರ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು. ಇಶ್ರಾತ್ ನಿಜಕ್ಕೂ ಅಮಾಯಕ ಹುಡುಗಿಯಾಗಿದ್ದಳು. ಒಬ್ಬ ಅಮಾಯಕ ಹುಡುಗಿಯ ಮೇಲೆ ಸುಳ್ಳು ಆರೋಪ ಹೊರಿಸುವ ಮೂಲಕ ರಾಷ್ಟ್ರೀಯವಾದ ಮತ್ತು ಭದ್ರತೆಯ ಬೋಗಿಯನ್ನು ಓಡಿಸಲಾಗುತ್ತಿದೆ. ಈ ಮೂಲಕ ಅಪರಾಧದಲ್ಲಿ ಭಾಗಿಯಾದವರನ್ನು ರಕ್ಷಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪ ವ್ಯಕ್ತಪಡಿಸಿದ್ದರು.

ಇಶ್ರಾತ್ ಜಹಾನ್ ಮುಂಬೈ ನ ಮುಂಬ್ರಾದ ನಿವಾಸಿಯಾಗಿದ್ದು, 2004ರಲ್ಲಿ ಗುಜರಾತ್ ನಲ್ಲೆ ನಡೆದ ಎನ್ ಕೌಂಟರ್ ನಲ್ಲಿ ಹತ್ಯೆಯಾಗಿದ್ದಳು. ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿದ್ದ ನಾಲ್ವರು ಉಗ್ರ ಸಂಘಟನೆಗೆ ಸೇರಿದ್ದವರಾಗಿದ್ದು, ಇವರು ನರೇಂದ್ರ ಮೋದಿ ಹಾಗೂ ಅಂದಿನ ಮುಖ್ಯಮಂತ್ರಿಗಳನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದರು. ಹೀಗಾಗಿ ನಾಲ್ವರನ್ನು ಎನ್ ಕೌಂಟರ್ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ, ಈ ಎನ್ ಕೌಂಟರ್ ಗೆ ಹಲವು ಟೀಕೆಗಳು ವ್ಯಕ್ತವಾಗಿದ್ದವು. ಇಶ್ರಾತ್ ಅಮಾಯಕಳೆಂದು ಹೇಳಲಾಗುತ್ತಿತ್ತು.ಈ ಪ್ರಕರಣಕ್ಕೆ ಮುಂಬೈ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ ಡೇವಿಡ್ ಹೆಡ್ಲಿ ಹೊಸ ತಿರುವನ್ನು ನೀಡಿದ್ದನು. ಎನ್ ಕೌಂಟರ್ ಆದ ಇಶ್ರಾತ್ ಜಹಾನ್ ಎಲ್ ಇ ಟಿ ಉಗ್ರ ಸಂಘಟನೆಗೆ ಸೇರಿದ್ದವಳಾಗಿದ್ದು, ಈಕೆ ಮಾನವ ಬಾಂಬರ್ ಆಗಿದ್ದಳು ಎಂದು ಹೇಳಿದ್ದ.

ಇದೀಗ ಪ್ರಕರಣ ಸಂಬಂಧ ಅಧಿಕಾರಿಗಳೇ ಪರ ವಿರೋಧ ಹಾಗೂ ವಿವಿಧ ರೀತಿಯ ಹೇಳಿಕೆಯನ್ನು ನೀಡುತ್ತಿರುವುದು ಹಲವು ಗೊಂದಲಗಳಿಗೆ ಕಾರಣವಾಗಿದೆ. ಹೀಗಾಗಿ ಇಶ್ರಾತ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಇದೀಗ ಪ್ರಕರಣ ಸಂಬಂಧವಿರುವ ಹಳೇ ಕಡತಗಳನ್ನು ಪರಿಶೀಲನೆ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಇದರಂತೆ ಅಂದಿನ ಗೃಹ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಪಿ. ಚಿದಂಬರಂ ವಿರುದ್ಧ ಸುಪ್ರೀಂನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com